ಬೆಂಗಳೂರು: ಇಂದು ಮುಂಜಾನೆಯಿಂದ ಸಚಿವ ಡಿ.ಕೆ ಶಿವಕುಮಾರ್ ಮತ್ತು ಡಿಸಿಎಂ ಜಿ. ಪರಮೇಶ್ವರ್ ಇಬ್ಬರು ಎಂಟಿಬಿ ನಾಗರಾಜ್ ಅವರ ಮನೆಯಲ್ಲಿ ಮನವೊಲಿಕೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದೀಗ ನಾಗರಾಜ್ ಅವರು ಡಿಕೆಶಿ ಮತ್ತು ಪರಂ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಸತತ 6 ಗಂಟೆಯಿಂದ ಮಾತುಕತೆ ನಡೆಸುತ್ತಿದ್ದರೂ ಎಂಟಿಬಿ ನಾಗರಾಜ್ ಅವರು ರಾಜೀನಾಮೆ ವಾಪಸ್ ಪಡೆಯಲು ಒಪ್ಪಿಲ್ಲ. ಈ ಮೂಲಕ ದೋಸ್ತಿ ನಾಯಕರ ಸಂಧಾನ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.
ನಾಗರಾಜ್ ಅವರು ಡಿ.ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ನನ್ನ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ನಾನು ರಾಜೀನಾಮೆ ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಬೇಡಿಕೆಯೇನು..?
ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದರೆ ನಾನು ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ. ಅಲ್ಲದೆ ಮುಂಬೈನಲ್ಲಿರುವ ಕೆಲವು ಅತೃಪ್ತರ ಜೊತೆ ಕೂಡ ನಾನು ಮಾತುಕತೆ ನಡೆಸುತ್ತೇನೆ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಾದರೆ ಮಾತ್ರ ನನ್ನ ಬೆಂಬಲವಿದೆ. ಇಲ್ಲ ಅಂದರೆ ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಎಂಟಿಬಿ ಅವರು ಡಿಕೆಶಿ ಮತ್ತು ಪರಂ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಡಿಕೆಶಿ ಹಾಗೂ ಪರಮೇಶ್ವರ್ ಮನವೊಲಿಕೆ ಜಗ್ಗದ ಎಂಟಿಬಿಯವರನ್ನು ಇದೀಗ ಸ್ವತಂ ಸಿಎಂ ಅವರೇ ಸಂಪರ್ಕಿಸಿದ್ದಾರೆ. ಸಿಎಂ ಅವರು ದೂರವಾಣಿ ಕರೆ ಮಾಡುವ ಎಂಟಿಬಿಯವರನ್ನು ಮನವೊಲಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಸಿಎಂ ಕರೆಗೂ ಎಂಟಿಬಿ ಕ್ಯಾರೇ ಎಂದಿಲ್ಲ ಎಂಬುದಾಗಿ ತಿಳಿದುಬಂದಿದೆ.