ಬೆಂಗಳೂರು: ಸ್ವಾಮೀಜಿಗಳ ಶಿರವಸ್ತ್ರದ ವಿಚಾರವಾಗಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂತರ ಕಾಯ್ದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರೇ ಉತ್ತರ ಕೊಡ್ತಾರೆ ಎಂದು ಡಿಕೆಶಿ ಜಾರಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಈಗಾಗಲೇ ಅವರು ಟ್ವೀಟ್ ಮಾಡಿದ್ದಾರೆ. ಅವರಿಗೆ ಎಲ್ಲಾ ಧರ್ಮ, ಸ್ವಾಮಿಗಳ ಮೇಲೆ ಗೌರವ ಇದೆ. ಅವರು ಸಿಎಂ ಆಗಿದ್ದಾಗ ಎಲ್ಲಾ ಧರ್ಮ ಗಳಿಗೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ ಅಂತಾ ಹೇಳಿದ್ದರು. ಸಿದ್ದರಾಮಯ್ಯ ಹೇಳಿಕೆಯನ್ನು ಪಕ್ಷದ ಪರವಾಗಿ ಸಮರ್ಥನೆ ಮಾಡಿಕೊಳ್ಳಲು ಡಿಕೆಶಿ ಹಿಂದೇಟು ಹಾಕಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಅಷ್ಟೇ ಅಲ್ಲದೆ ಹಿಜಬ್ ವಿಚಾರವಾಗಿಯೂ ಕೂಡ ರಕ್ಷಣಾತ್ಮಕವಾಗಿ ಪ್ರತಿಕ್ರಿಯೆ ಕೊಟ್ಟಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನವೇ ಬೈಬಲ್, ಕುರಾನ್, ಭಗವದ್ಗೀತೆ. ಕೋರ್ಟ್ ತೀರ್ಪನ್ನು ಪಾಲಿಸಬೇಕು. ಹಿಜಬ್ ವಿಚಾರವಾಗಿ ಕೆಲವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಕಾನೂನಿನಲ್ಲಿ ಅವಕಾಶ ಇದೆ ಹೋಗಿದ್ದಾರೆ. ಈಗಾಗಲೇ ಹೈಕೋರ್ಟ್ ತೀರ್ಪು ಇರೋದ್ರಿಂದ ಪಾಲಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ
ಹಿಜಬ್ ಧರಿಸಿದರೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಣೆ ಸುತ್ತೋಲೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ವಿದ್ಯಾಭ್ಯಾಸ ಬಹಳ ಮುಖ್ಯ. ಹಿಜಬ್ ವಿಚಾರದಲ್ಲಿ ಮಕ್ಕಳಲ್ಲಿ ಮನವರಿಕೆ ಮಾಡಬೇಕು. ತಂದೆ-ತಾಯಿಗಳು, ಗುರುಗಳು ಮಕ್ಕಳ ಮನವೊಲಿಸಬೇಕು. ಗುರುಗಳು ಹೇಳಿದರೆ ಮಕ್ಕಳು ಕೇಳುತ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ಇರುವ ವಿಚಾರಗಳಿಗೆ ಬೆಲೆ ಕೊಡುತ್ತದೆ ಎಂದು ಡಿಕೆಶಿ ಹೇಳುವ ಮೂಲಕ ಯಾರನ್ನೂ ಸಮರ್ಥನೆ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ಡಿಕೆಶಿ
ಇನ್ನೊಂದೆಡೆ ಕಾಂಗ್ರೆಸ್ನ ಯಾರೊಬ್ಬರೂ ಪ್ರಮುಖ ನಾಯಕರು ಸಿದ್ದರಾಮಯ್ಯ ಹೇಳಿಕೆಗೆ ರಿಯಾಕ್ಟ್ ಮಾಡದೇ ದೂರ ಉಳಿದಿದ್ದು ಅಚ್ಚರಿ ತಂದಿದೆ. ಹಿಜಬ್ ಪರ-ವಿರೋಧ, ಸಿದ್ದರಾಮಯ್ಯ ಹೇಳಿಕೆ ಪರ ಅಂತರ ಕಾಯ್ದುಕೊಳ್ಳಲು ಪಕ್ಷದಿಂದ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಹೇಳಿಕೆಯ ಚರ್ಚೆಗಳಲ್ಲಿ ಭಾಗವಹಿಸದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆ ಕೊಡುವ ಮೂಲಕ ಸಿದ್ದರಾಮಯ್ಯ ಹೇಳಿಕೆ ಸಮರ್ಥನೆ ಮಾಡಿಕೊಳ್ಳದಂತೆ ಸೂಚ್ಯವಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.