ಬೆಂಗಳೂರು: ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ನಡೆಸಲು ಸೂಚಿಸುವಂತೆ ಡಿ.ಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ದೆಹಲಿ ಹೈಕೋರ್ಟಿನಲ್ಲಿ ನಡೆಯಲಿದೆ.
ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ವಿಚಾರಣೆ ನಡೆಸಲಿದ್ದು ನಾಳೆ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ನವೆಂಬರ್ ಏಳಕ್ಕೆ ವಾದ ಮಂಡಿಸಿದ್ದ ಉಷಾ ಮತ್ತು ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್, 15 ವರ್ಷದ ಕೆಳಗಿನ ಮತ್ತು 65 ವರ್ಷ ಮೇಲ್ಪಟ್ಟ ವಯಸ್ಸಿನವರನ್ನು ವಿಚಾರಣೆ ಕರೆಯಬಾರದು, ಒಂದು ವೇಳೆ ವಿಚಾರಣೆ ಅವಶ್ಯಕತೆ ಇದ್ದರೆ ಅವರಿರುವ ಸ್ಥಳದಲ್ಲಿ ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಮಹಿಳೆಯರನ್ನು ಪೋಲಿಸ್ ಠಾಣೆಯಲ್ಲೇ ವಿಚಾರಣೆ ಮಾಡಬೇಕು ಎನ್ನುವ ನಿಮಯಗಳಿಲ್ಲ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ಉಷಾ ಅವರು ಗೃಹಿಣಿ. ಹೀಗಾಗಿ ದೆಹಲಿ ತನಕ ವಿಚಾರಣೆ ಬರಲು ಸಾಧ್ಯವಿಲ್ಲ. ಅಲ್ಲದೇ ನಾವು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ಮಾಡಿಲ್ಲ. ಆರೋಗ್ಯ ಸಹಕರಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ನಮ್ಮ ನಿವಾಸದಲ್ಲಿ ವಕೀಲರ ಸಮ್ಮಖದಲ್ಲಿ ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡಿದ್ದರು. ಅಂದು ಇಡಿ ಪರ ಹಿರಿಯ ವಕೀಲರು ಗೈರಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿಕೆಯಾಗಿತ್ತು.
ಉಷಾ ಮತ್ತು ಗೌರಮ್ಮ ಪರ ವಕೀಲರ ವಾದಕ್ಕೆ ಇಡಿ ಪರ ವಕೀಲರು ಕೋರ್ಟ್ ಮುಂದೆ ಹಾಜರಾಗಿ ಪ್ರತಿವಾದ ಮಂಡಿಸಲಿದ್ದು ಆದೇಶ ಕಾಯ್ದಿರಿಸುವ ಸಾಧ್ಯತೆ ಇದೆ.