ರಾಮನಗರ: ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಹಿನ್ನೆಲೆಯಲ್ಲಿ ಅವರ ತಾಯಿ ಗೌರಮ್ಮ ಅವರ ವಿಚಾರಣೆಗೆ ಇಡಿ ಅಧಿಕಾರಿಗಳ ತಂಡ ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸಕ್ಕೆ ಆಗಮಿಸಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿನ ತೋಟದ ಮನೆಗೆ ಎರಡು ಕಾರ್ ಗಳಲ್ಲಿ ಬಂದ ಐವರು ಅಧಿಕಾರಿಗಳ ತಂಡ ಡಿಕೆಶಿ ತಾಯಿ ಗೌರಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಕೋಡಿಹಳ್ಳಿಯ ಹೊರವಲಯದಲ್ಲಿರುವ ತೋಟದ ಮನೆಯಲಿ ಬೆಳಗ್ಗಿನಿಂದ ಗೌರಮ್ಮರ ಆರೋಗ್ಯದ ಬಗ್ಗೆ ಅವರ ಫ್ಯಾಮಿಲಿ ಡಾಕ್ಟರ್ ರಿಂದ ತಪಾಸಣೆ ನಡೆಸಲಾಗಿದೆ.
ವಿಚಾರಣೆಗಾಗಿ ದೆಹಲಿಗೆ ವಿಚಾರಣೆಗೆ ಬರುವಂತೆ ಇ.ಡಿ. ಅಧಿಕಾರಿಗಳು ಗೌರಮ್ಮ ಅವರಿಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಗೌರಮ್ಮ, ಅನಾರೋಗ್ಯ ಮತ್ತು ವಯಸ್ಸಾದ ಕಾರಣ ವಿಚಾರಣೆಗೆ ವಿನಾಯಿತಿ ನೀಡಬೇಕು. ಇಲ್ಲವೇ ತಮ್ಮ ನಿವಾಸದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಕೋರಿದ್ದರು. ಅವರ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ ಕಾರಣ ಕೋಡಿಹಳ್ಳಿ ನಿವಾಸದಲ್ಲಿ ವಿಚಾರಣೆ ನಿಗದಿಯಾಗಿತ್ತು.