ಬೆಂಗಳೂರು: ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಸದ್ಯ ಈ ಕುರಿತಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು. ಬಂಡವಾಳ ಹೂಡಿಕೆ ಬಗ್ಗೆ ಮೊದಲಿನಂತೆ ಆಸಕ್ತಿ ತೋರುತ್ತಿಲ್ಲ. ಅಭಿವೃದ್ಧಿ ಅಜೆಂಡಾ ಬಿಟ್ಟು ಕಮ್ಯುನಲ್ ಅಜೆಂಡಾ ಮುಂದಿಡುತ್ತಿದ್ದಾರೆ. ಅವರು ಮಾಡಿರುವ ಬಜೆಟ್ ಬಗ್ಗೆ ಅವರೇ ಮಾತನಾಡಲು ಆಗುತ್ತಿಲ್ಲ. ನಿರ್ಮಾಲ ಸೀತಾರಾಂ ಇಲ್ಲಿಂದ ಹೋಗಿ, ಬೆಂಗಳೂರಿಗೆ ಏನು ಕೊಟ್ಟರು? ಏನಾದರೂ ಕೊಡುಗೆ ಇದೆಯಾ? ಈಗ ಬಿಜೆಪಿಯವರು ಮಳೆ ಬಂತು ಅಂತಾ ಚತ್ರಿ ಕೆಳಗೆ ನಿಂತುಕೊಂಡು ನೋಡುತ್ತಿದ್ದೇನೆ ಅಂದರೆ ಪ್ರಯೋಜನ ಏನು? ಚೆನ್ನಾಗಿರುವ ರಸ್ತೆಯನ್ನೆಲ್ಲಾ ಕಿತ್ತು ಹಾಕುತ್ತಿದ್ದಾರೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಏನೇನಾಗಿದೆ? ಸದಾಶಿವ ನಗರದಲ್ಲಿ ಚೆನ್ನಾಗಿರುವ ರಸ್ತೆ ಅಗೆದಿದ್ದಾರೆ. 3 ವರ್ಷದ ಹಿಂದೆ ಮಾಡಿದ ಫುಟ್ ಪಾತ್ ಕಿತ್ತು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮಗೆ ನಮ್ಮ ಇತಿಹಾಸದ ಭಗತ್ ಸಿಂಗ್ ಹಿಂದೆ ಏನಿತ್ತು ಎನ್ನುವುದು ಇರಬೇಕು. ರಾಮಾಯಣ, ಮಹಾಭಾರತದಲ್ಲಿ ಏನಿತ್ತು ಅದೆಲ್ಲವೂ ಇರಬೇಕು. ಈಗ ನಾರಾಯಣ್ ಗುರು ಪಾಠ ತೆಗೆದಿಲ್ಲ ಅಂತಾರೆ. ಆದರೆ ಚಿಂತನೆ ಇತ್ತು. ಅವರ ಟ್ಯಾಬ್ಲೋ ತೆಗೆದಾಗ ಸುನಿಲ್ ಕುಮಾರ್ ಧ್ವನಿ ಎಲ್ಲಿ ಹೋಗಿತ್ತು. ನಾರಾಯಣ ಗುರು ಇರಲಿ, ಭಗತ್ ಸಿಂಗ್ ಇರಲಿ. ಹಿಂದೆ ಇದ್ದ ಪಠ್ಯ ಈಗ ಇರಬೇಕು ಎನ್ನುವುದೇ ನಮ್ಮ ಹೋರಾಟ. ಮೊದಲಿನಿಂದಲು ಅವರು ನಾರಾಯಣ ಗುರುವನ್ನು ಬದಿಗೆ ಸರಿಸುತ್ತಾ ಬಂದಿದ್ದಾರೆ. ಈಗ ಸುನಿಲ್ ಕುಮಾರ್ ಹೇಳುತ್ತಾರೆ ಅಷ್ಟೇ. ಆಗ ಅವರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ
ಪರಿಷತ್ ಟಿಕೆಟ್ : ಎರಡು ಸ್ಥಾನಕ್ಕೆ ಹಲವರು ಬೇಡಿಕೆ ಇಟ್ಟಿದ್ದಾರೆ. ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ನಾಳೆ ಕುಳಿತು ಮಾತನಾಡುತ್ತೇವೆ. ಈಗಾಗಲೇ ಒಂದು ಸುತ್ತು ಮಾತನಾಡಿದ್ದೇವೆ. ಎಲ್ಲವನ್ನು ಚರ್ಚಿಸಿ ಪಟ್ಟಿ ಅಂತಿಮಗೊಳಿಸುತ್ತೇವೆ. ರಾಜ್ಯಸಭೆ ವಿಚಾರಕ್ಕೆ ಪಕ್ಷದಲ್ಲಿ ಪದ್ದತಿ ಇದೆ. ಸರ್ಕಾರ ಇರಲಿ, ಇಲ್ಲದೇ ಇರಲಿ ಹೈಕಮಾಂಡ್ ಹೇಳಿದಂತೆ ನಿರ್ಧಾರ ಮಾಡುತ್ತೇವೆ. ರಾಷ್ಟ್ರೀಯ ಹಿತಾಸಕ್ತಿ ಇಟ್ಟುಕೊಂಡು ನಾವು ಒಪ್ಪುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಅವರನ್ನು ಕರೆತರುವ ವಿಚಾರವಾಗಿ, ದಕ್ಷಿಣದೆಲ್ಲೆಲ್ಲಾ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ, ಓಡಾಡಿದ್ದಾರೆ, ಇಲ್ಲೂ ಬರಲಿ. ರಾಜ್ಯಕ್ಕೆ ಬಂದರೆ ಇದರಿಂದ ಚುನಾವಣೆಗೆ ಸಹಾಯ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್