ಶಿವಮೊಗ್ಗ: ಸಚಿವ ಡಿಕೆ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಮನವಿಯಂತೆ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಚಾರ ಕಣಕ್ಕೆ ಪ್ರವೇಶ ಮಾಡಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ನಿರಂತರ ಸಭೆ, ಪ್ರಚಾರ ಕೈಗೊಳ್ಳಲಿದ್ದಾರೆ.
ಇಂದು ಭದ್ರಾವತಿಗೆ ಕಾಫ್ಟರ್ ನಲ್ಲಿ ಬಂದಿಳಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ, ಶಿವಮೊಗ್ಗಕ್ಕೆ ಶುಭ ಗಳಿಗೆಯಲ್ಲಿ ಕಾಲಿಟ್ಟಿದ್ದಿನಿ. ಯಾವುದೇ ತೊಂದರೆ, ಅಡಚಣೆ ಆಗದೆ ಕಾಫ್ಟರ್ ನಲ್ಲಿ ಬಂದಿಳಿದಿದ್ದು, ಒಳ್ಳೆಯ ಕೆಲಸ ಮಾಡುವಾಗ ಹಾಲುಮತದವರನ್ನು ಜೊತೆ ಇಟ್ಟುಕೊಳ್ಳುವುದು ಸಂಪ್ರದಾಯ. ಇವತ್ತು ಅವರೂ ಕೂಡ ನಮ್ಮ ಜೊತೆ ಬಂದಿದ್ದಾರೆ. ಇಡೀ ದೇಶ ಬದಲಾವಣೆ ನಿರೀಕ್ಷೆಯಲ್ಲಿದೆ. ಶಿವಮೊಗ್ಗದಲ್ಲೂ ಜನ ಹೊಸ ನಿರೀಕ್ಷೆ, ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ಬರೀ ಶಿವಮೊಗ್ಗ ಅಲ್ಲ ಪಕ್ಷ ಎಲ್ಲೆಲ್ಲಿ ಬಯಸುತ್ತೋ, ಅಲ್ಲೆಲ್ಲಾ ಹೋಗುತ್ತೇನೆ ಎಂದು ಬಿಜೆಪಿ ಪಕ್ಷದ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಆಯನೂರು ಮಂಜುನಾಥ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದೇ ವೇಳೆ ಮಂಡ್ಯ ನಾಮಪತ್ರ ಗೊಂದಲ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿ, ನಾಮಪತ್ರ ಸಲ್ಲಿಕೆ ಆಗಿದ್ದು, ಕ್ರಮಬದ್ಧ ಆಗಿದ್ದಲ್ಲಿ, ಆಗದಿದ್ದಲ್ಲಿ ಅದನ್ನು ಚುನಾವಣಾ ಆಯೋಗದ ಹಾಗೂ ಅಧಿಕಾರಿಗಳು ಗಮನ ಹರಿಸುತ್ತಾರೆ. ಅಲ್ಲದೇ ನ್ಯಾಯಾಲಯಕ್ಕೂ ಹೋಗಲು ಅವಕಾಶ ಇದೆ ಎಂದರು.
ಲೋಕಸಭಾ ಉಪಚುನಾವಣೆಯಲ್ಲಿ, ಶ್ರೀರಾಮುಲು ಅಣ್ಣಾ ಅವರು ಶಾಂತಕ್ಕೆ ದೆಹಲಿಗೆ, ಡಿಕೆಶಿ ಜೈಲಿಗೆ ಎಂದಿದ್ದರು. ಆದರೆ ಉಗ್ರಪ್ಪ ದೆಹಲಿಗೆ ಹೋದರು, ನಾನು ಇಲ್ಲೇ ಇದ್ದೀನಿ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಮಗ ಎಂಬ ನಮ್ಮ ಮುಂದೇ ಇಲ್ಲ. ಇಡೀ ದೇಶವೇ ಬದಲಾವಣೆಯ ನಿರೀಕ್ಷೆಯಲ್ಲಿದ್ದು, ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಸರ್ಕಾರ ಬದಲಾಗಬೇಕು. ನಾನೂ ಕೂಡ 30-40ವರ್ಷ ಹೋರಾಟ ಮಾಡಿಕೊಂಡು ಬಂದಿದ್ದೇನೆ. ದೇಶಕ್ಕಾಗಿ ಪಕ್ಷ ನಿರ್ಧಾರ ಕೈಗೊಂಡಾಗ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಮೈತ್ರಿ ವಿರುದ್ಧ ಉಂಟಾಗಿರುವ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಜನತೆ ವ್ಯಕ್ತಿಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ. ಪಕ್ಷದ ಚೌಕಟ್ಟಿನಲ್ಲಿ ಯಾರು ಇರುವುದಿಲ್ಲವೋ ಅವರ ಮೇಲೆ ಪಕ್ಷ ಕ್ರಮಕೈಗೊಳ್ಳತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಅಂದರೆ ಒಂದೇ ಗಾಡಿಲಿ ಹೋಗಬೇಕಾಗತ್ತೆ. ಇಲ್ಲ ಎಂದರೆ ಅಂಥವರು ಬೇರೆ ಗಾಡಿಲಿ ಹೋಗಬಹುದು ಎಂದು ಬಂಡಾಯಗಾರರಿಗೆ ಎಚ್ಚರಿಕೆ ನೀಡಿದ್ರು.