ಬೂದಿ ಮುಚ್ಚಿದ ಕೆಂಡವಾದ ಕನಕಪುರ- ರಸ್ತೆಗಿಳಿಯದ ಬಸ್ಸುಗಳು

Public TV
2 Min Read
Kanakapura F

ರಾಮನಗರ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ಹಿನ್ನೆಲೆ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಈ ಹಿನ್ನೆಲೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳಾಗಲಿ ರಸ್ತೆಗಿಳಿಯದ ಕಾರಣ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಕನಕಪುರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್ ಡಿಪೋ ಬಳಿ ಸಿಬ್ಬಂದಿ ಹಾಜರ್ ಆಗಿ ಬಸ್ಸುಗಳನ್ನು ಹೊರಗೆ ತೆಗೆಯದಿರಲು ನಿರ್ಧರಿಸಿದ್ದಾರೆ. ಮಂಗಳವಾರ ರಾತ್ರಿ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನ ಬಂಧನ ಖಂಡಿಸಿ, 1 ಬಸ್ಸಿಗೆ ಬೆಂಕಿ ಹಚ್ಚಿ, ಸುಮಾರು 4 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.

Kanakapura Bandh 1

ಇತ್ತ ಬಸ್ಸಿಗಾಗಿ ಪ್ರಯಾಣಿಕರು ಕಾಯುತ್ತಿದ್ದಾರೆ. ಆದರೆ ಬಸ್ ನಿಲ್ದಾಣದೊಳಗೆ ಒಂದೇ ಒಂದು ಬಸ್ ಕೂಡ ಬರುತ್ತಿಲ್ಲ. ಹಾಗೆಯೇ ಕನಕಪುರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿದೆ. ತರಕಾರಿಗಳನ್ನು ವ್ಯಾಪಾರಸ್ಥರು ತಂದು ಮಾರಾಟಕ್ಕೆ ಕೂತಿದ್ದಾರೆ, ಆದರೆ ಖರೀದಿಗೆ ಯಾರೂ ಬರುತ್ತಿಲ್ಲ. ಒಂದೆಡೆ ಬೆಳಗ್ಗಿನ ವೇಳೆ ಸಹಜ ಸ್ಥಿತಿಯಲ್ಲಿರುವ ಕನಕಪುರ ಕಾಣುತ್ತಿದ್ದರೂ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿನ ಪರಿಸ್ಥಿತಿ ಇದೆ.

ಕನಕಪುರದಲ್ಲಿ ನಿಧಾನವಾಗಿ ಒಂದೊಂದೆ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳುತ್ತಿದೆ. ಬಸ್ ನಿಲ್ದಾಣದ ಬಳಿಯ ಬೇಕರಿಗಳನ್ನು ಕೂಡ ತೆರೆಯಲಾಗಿದೆ. ಅಲ್ಲದೆ ಮತ್ತೆ ಯಾವುದೇ ಅಹಿತಕರ ಘಟನೆಗಳು, ಗಲಾಟೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ.

dkshi arrest protest

 

ದೆಹಲಿ ನಿವಾಸದಲ್ಲಿ ಹಣ ಸಿಕ್ಕ ಪ್ರಕರಣ ಸಂಬಂಧ ಇಡಿ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 8.30ಕ್ಕೆ ಮಾಜಿ ಸಚಿವ, ಕರ್ನಾಟಕ ಕಾಂಗ್ರೆಸ್ ಆಪದ್ಬಾಂಧವ ಡಿಕೆ ಶಿವಕುಮಾರ್ ರನ್ನು ಬಂಧಿಸಿದೆ. ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ, ಮಾಜಿ ಸಚಿವರ ಬೆಂಬಲಿಗರು ದೆಹಲಿ ಸೇರಿದಂತೆ ರಾಜ್ಯದಲ್ಲಿ ಕೂಡ ಮಂಗಳವಾರ ರಾತ್ರಿಯೇ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಅಭಿಮಾನಿಗಳು ಬೀದಿಗಿಳಿದು ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದ್ದು, ಈ ವೇಳೆ ಕೆಲವೆಡೆ ಹಿಂಸಾಚಾರ ಕೂಡ ನಡೆದಿತ್ತು.

ರಾಮನಗರದಲ್ಲಿ ಡಿಕೆಶಿ ಅಭಿಮಾನಿಗಳಿ ಕೆಎಸ್‍ಆರ್ ಟಿಸಿಯ 1 ಬಸ್‍ಗೆ ಬೆಂಕಿ 4 ಬಸ್‍ಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಐಜೂರು ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಭಿಮಾನಿಗಳು ರೋಷಾವೇಶ ಪ್ರದರ್ಶಿಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಕೇಂದ್ರ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಹೆದ್ದಾರಿ ತಡೆದ ಪ್ರತಿಭಟನಕಾರರು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೀತು. ಈ ವೇಳೆ ಡಿಕೆ ಅಭಿಮಾನಿಯೋರ್ವ ವಾಹನದ ಕೆಳಗೆ ಮಲಗಲು ಯತ್ನಿಸಿದ ಘಟನೆ ಸಂಭವಿಸಿತ್ತು.

DK Shivakumar ED Main 2 1

ಕಲ್ಲಹಳ್ಳಿ ಗೇಟ್, ಕನಕಪುರ: ಡಿಕೆ ಅಭಿಮಾನಿಗಳು ಕನಕಪುರ ಕೋಡಿಹಳ್ಳಿ ಸಂಪರ್ಕ ರಸ್ತೆ ಬಂದ್ ಮಾಡಿ ರಸ್ತೆಗಳಲ್ಲಿ ಮರದ ದಿಮ್ಮಿಗಳನ್ನಿಟ್ಟು ಬೆಂಕಿ ಹಚ್ಚಿದರು. ಇದಲ್ಲದೇ ರಸ್ತೆಗೆ ಕಲ್ಲುಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು. ಇದೇ ವೇಳೆ ಎಸ್.ಪಿ ಸ್ವತಃ ಪರಿಸ್ಥಿತಿ ನಿಯಂತ್ರಿಸಿದರು. ಕನಕಪುರ ಗಲ್ಲಿ ಗಲ್ಲಿಗಳಲ್ಲೂ ಪೊಲೀಸರ ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾತನೂರು, ಚನ್ನಬಸಪ್ಪ ಸರ್ಕಲ್‍ನಲ್ಲೂ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದು ಪ್ರತಿಭಟಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *