ವಿಚ್ಛೇದನದ ವಿಚಾರಣೆ ಮುಗಿಸಿ ತವರಿಗೆ ಹೋಗುತ್ತಿದ್ದ ಪತ್ನಿ – ರಸ್ತೆಯಲ್ಲೇ ಕೊಚ್ಚಿ ಕೊಂದ ಪತಿ

Public TV
1 Min Read
belagavi wife died

ಬೆಳಗಾವಿ: ಹಾಡಹಗಲೇ ಪತ್ನಿಯನ್ನೇ ಪತಿ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ  ಘಟನೆ ಬೆಳಗಾವಿಯ ಕೋಟೆ ಕೆರೆ ಬಳಿ ನಡೆದಿದೆ.

ಬೆಳಗಾವಿಯ ಗಾಂಧಿನಗರದ ನಿವಾಸಿ ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್(27) ಕೊಲೆಯಾದ ದುರ್ದೈವಿ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಮಂಜೂರ್ ಇಲಾಹಿ ನದಾಫ್(34)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

belagavi wife died 1

ಗಾಂಧಿನಗರದ ಹೀನಾಕೌಸರ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್‍ನನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು, ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ. ಇದನ್ನೂ ಓದಿ: ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡ್ತೇವೆ ಎಂದ ಪೋಷಕರು – ಭಯಭೀತರಾಗಿರುವ ನವಜೋಡಿ

ವಿಚ್ಛೇದನಕ್ಕೆ ಅರ್ಜಿ
ಮಂಜೂರ್-ಹೀನಾಕೌಸರ್ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣಕ್ಕೆ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್ ವಿಚ್ಛೇದನ ಕೋರಿ, ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್‍ಗೆ ಹಾಜರಾಗಿ ಗಾಂಧಿನಗರದಲ್ಲಿರುವ ತವರು ಮನೆಗೆ ಹೀನಾಕೌಸರ್ ವಾಪಸ್ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ ಆಗಮಿಸಿದ ಮಂಜೂರು ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್‌ನನ್ನು ಅಡ್ಡಗಟ್ಟಿದ್ದಾನೆ.

crime

ಕೆಲ ಹೊತ್ತು ಹೀನಾಕೌಸರ್ ಜೊತೆಗೆ ವಾಗ್ವಾದವನ್ನೂ ಮಾಡಿದ್ದಾನೆ. ಬಳಿಕ ಹೀನಾಕೌಸರ್ ಕುತ್ತಿಗೆ, ಕೈಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ವಿಲವಿಲನೇ ಒದ್ದಾಡುತ್ತಿದ್ದ ಆಕೆಯನ್ನು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಹೀನಾಕೌಸರ್ ಮೃತಪಟ್ಟಿದ್ದಾರೆ.

ಮೃತದೇಹವನ್ನು ಜಿಲ್ಲಾಸ್ಪತ್ರೆಯಿಂದ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು  ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಇದನ್ನೂ ಓದಿ: ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

crime

ಮಂಜೂರ್ ಕೆಲ ವರ್ಷಗಳಿಂದ ಹೀನಾಮಂಜೂರ್ ಮೇಲೆ ದೈಹಿಕ ಹಲ್ಲೆ ಜೊತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಹೀನಾಕೌಸರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

Share This Article