ಬೆಂಗಳೂರು: ಇಂದು ಅನರ್ಹ ಶಾಸಕರ ಭವಿಷ್ಯ ಏನು ಎನ್ನುವುದನ್ನ ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ. ಹೀಗಾಗಿ ಅನರ್ಹರಿಗಷ್ಟೇ ಅಲ್ಲ ಬಿಜೆಪಿಗೂ ತೀರ್ಪು ಏನಾಗಲಿದೆ ಎಂಬ ಎದೆಬಡಿತ ಹೆಚ್ಚಾಗಿದೆ.
ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದ ಬಳಿಕ ಬಿಜೆಪಿ ಮಹತ್ವದ ಕೋರ್ ಕಮಿಟಿ ಸಭೆ ನಡೆಸಲಿದೆ ಎನ್ನಲಾಗಿದೆ. ಉಪಚುನಾವಣೆಗೆ ಟಿಕೆಟ್ ಹಂಚಿಕೆ ಸಂಬಂಧ ಮಹತ್ವದ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಇಂದು ಮಧ್ಯಾಹ್ನ 3 ಗಂಟೆವರೆಗೆ ಸಿಎಂ ಯಡಿಯೂರಪ್ಪ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅನರ್ಹರ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಸುಪ್ರೀಂಕೋರ್ಟಿನಿಂದ ಇಂದು ಜಡ್ಜ್ಮೆಂಟ್ – ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗ್ತಾರಾ ರೆಬೆಲ್ಸ್?
ಹಾಗೆಯೇ ಈ ಮಧ್ಯೆ ಅನರ್ಹರ ಭವಿಷ್ಯ ಏನಾಗಲಿದೆ ಎಂಬ ಹಲವು ಪ್ರಶ್ನೆಗಳು ರಾಜಕೀಯ ಪಾಳಯದಲ್ಲಿ ಹುಟ್ಟಿಕೊಂಡಿದೆ. ಕಾಂಗ್ರೆಸ್ ಉಪಚುನಾವಣೆಗೆ ಉಳಿದ ಟಿಕೆಟ್ ಅನೌನ್ಸ್ ಮಾಡುತ್ತಾ? ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲಕ್ಕೆ ಇಂದೇ ತೆರೆ ಬೀಳುತ್ತಾ? ಯಾರಿಗೆ ಸಿಗುತ್ತೆ ಬಿಜೆಪಿ ಟಿಕೆಟ್? ಅನರ್ಹರಿಗಾ ಅಥವಾ ಅವರ ಕುಟುಂಬಸ್ಥರಿಗಾ? ಇಲ್ಲಾ ಪಕ್ಷದವರಿಗಾ ಎನ್ನುವ ಸಾಲು ಸಾಲು ಪ್ರಶ್ನೆಗಳು ರಾಜ್ಯ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ತಲೆ ಕಡೆಸಿದೆ.
ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವ ನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು ಇಂದಿನ ತೀರ್ಪು ಬಗ್ಗೆ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ತಿಂಗಳುಗಳ ಕಾನೂನು ಹೋರಾಟಕ್ಕೆ ಅಂತಿಮ ದಿನ ಬಂದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಅನರ್ಹ ಶಾಸಕರ ಭವಿಷ್ಯ ನಿರ್ಧಾರ ಆಗಲಿದೆ.