ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರ ಫೋನ್ ಸಹ ಟ್ಯಾಪಿಂಗ್ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ಯಾಟೂ ಜಗ್ಗನ ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು. ಇದೇ ಎಫ್ಐಆರ್ ಎಸ್.ಟಿ.ಸೋಮಶೇಖರ್ ಮೊಬೈಲ್ ನಂಬರ್ ಸೇರಿಸಿ ಟ್ಯಾಪಿಂಗ್ ನಡೆಸಲಾಗಿದೆ. ಕ್ರೈಂ ನಂಬರ್ 03/2019ರ ಎಫ್ಐಆರ್ ನಲ್ಲಿ 120 ಗಂಟೆಗಳ ಕಾಲ ಫೋನ್ ಕದ್ದಾಲಿಕೆ ನಡೆದಿದೆ. ಈ ಎಫ್ಐಆರ್ ಮೂಲಕ ಹಲವು ಮೊಬೈಲ್ ಗಳ ಟ್ಯಾಪಿಂಗ್ ನಡೆದಿರುವ ಶಂಕೆಗಳು ವ್ಯಕ್ತವಾಗಿವೆ.
ಹವಾಲಾ ದಂಧೆಕೋರರ ಹೆಸರಲ್ಲಿ ಟ್ಯಾಪಿಂಗ್:
ಇನ್ನು ಹವಾಲಾ ದಂಧೆಕೋರರ ಹೆಸರಲ್ಲಿ ಮೂವರು ರಾಜಕಾರಣಿಗಳ ಫೋನ್ ಮೇಲೆ ಕಳ್ಳಗಿವಿ ಕೆಲಸ ಮಾಡಿತ್ತು. ಚಿಕ್ಕಪೇಟೆ ಹವಾಲ ದಂಧೆಕೋರರಲ್ಲಿ ಎಂಟಿಬಿ ನಾಗರಾಜ್, ಸುಧಾಕರ್, ರೋಷನ್ ಬೇಗ್ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಿಎ ಸಂತೋಷ್ ಹೆಸರು ಸೇರಿಸಲಾಗಿತ್ತು. ಈ ಮೂಲಕ ನಾಲ್ವರ ಮೊಬೈಲ್ ಟ್ಯಾಪ್ ಮಾಡಲಾಗಿತ್ತು. ಇದೇ ಹವಾಲಾ ಕೇಸ್ನಲ್ಲಿ ನಿರಂತರವಾಗಿ 17 ನಂಬರ್ ಗಳು ಟ್ಯಾಪಿಂಗ್ ಆಗಿದೆ ಎಂದು ತಿಳಿದು ಬಂದಿದೆ.