ಬೆಂಗಳೂರು: ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹ ಶಾಸಕರು ಗುರುವಾರ ಅಥವಾ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಅನರ್ಹ ಶಾಸಕರ ಪೈಕಿ ಹಲವು ಮಂದಿ ಉಪಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ದೆಹಲಿಯಲ್ಲಿ ಸೇರ್ಪಡೆಯಾಗುತ್ತಾರೋ ಅಥವಾ ಬೆಂಗಳೂರಿನಲ್ಲಿ ಸೇರ್ಪಡೆಯಾಗುತ್ತಾರೋ ಎನ್ನುವುದು ನಿರ್ಧಾರವಾಗಬೇಕಿದೆ.
ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಇಂದು ಸಿಎಂ ಸಂಜೆ 3 ಗಂಟೆಯವರೆಗೆ ಧವಳಗಿರಿಯಲ್ಲೇ ಇರಲಿದ್ದಾರೆ. ಇಂದು ಸಂಜೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು ಇಲ್ಲಿ ನಿರ್ಧಾರವಾಗಲಿದೆ.
ಪಕ್ಷದ ಹೈಕಮಾಂಡ್ ದೆಹಲಿಯಲ್ಲಿ ಸೇರ್ಪಡೆಗೆ ಅನುಮತಿ ನೀಡಿದರೆ ರಾಷ್ಟ್ರ ರಾಜಧಾನಿಯಲ್ಲೇ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
17 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನರ್ಹತೆ ಮಾಡಿದ್ದು ಸರಿಯಲ್ಲ. ಈ ಅನರ್ಹಗೊಂಡ ಶಾಸಕರು ಈಗ ಯಾವುದೇ ಹುದ್ದೆ, ಅಧಿಕಾರವನ್ನು ಹೊಂದುವಂತಿಲ್ಲ. ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.