ನವದೆಹಲಿ: ನಾನು ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದು, ನನ್ನ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನ ಮಾಡಲು ತೀರ್ಮಾನಿಸಿದ್ದು ನಿಜ. ಆದರೆ ಅಂದು ನನ್ನ ಅರ್ಜಿಯನ್ನು ತಿರಸ್ಕರಿಸಿದ್ದ ಸ್ಪೀಕರ್ ಅವರು ನಿಯಮಗಳ ಪ್ರಕಾರ ಸಲ್ಲಿಸಕೆ ಮಾಡಲು ಸೂಚನೆ ನೀಡಿದ್ದರು. ಆದ್ದರಿಂದ ನಾನು ಗೆದ್ದ ಪಕ್ಷ ಸ್ವತಂತ್ರವಾಗಿದೆ ಎಂದು ಅನರ್ಹ ಶಾಸಕ ಆರ್ ಶಂಕರ್ ಹೇಳಿದ್ದಾರೆ.
ಕೋರ್ಟ್ ಮಧ್ಯಂತರ ಆದೇಶ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದೆ. ನಾನು ಮೊದಲೇ ನನ್ನ ಕ್ಷೇತ್ರ ರಾಣೆಬೆನ್ನೂರಿನಲ್ಲಿ ಚುನಾವಣೆ ನಡೆಯಲ್ಲ ಎಂದು ಹೇಳಿದ್ದೆ. ನ್ಯಾಯಾಲಯ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ಸದ್ಯ ಮುಂದಿನ ವಿಚಾರಣೆ ಬಾಕಿ ಉಳಿದ ಹಿನ್ನೆಲೆಯಲ್ಲಿ ಎಲ್ಲರಿಗೂ ರಿಲೀಫ್ ಸಿಕ್ಕಿದೆ ಎಂದರು.
ಸದ್ಯ ನಮ್ಮ ಸ್ಥಿತಿ ಅತಂತ್ರವೋ, ಅನರ್ಹವೋ ಎಂದು ಕೋರ್ಟ್ ನಿರ್ಧರಿಸುತ್ತದೆ. ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ತೀರ್ಪು ಬರುವವರೆಗೂ ಕಾಯಲೇಬೇಕು. ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡುವುದು ಸರಿಯಲ್ಲ. ಪ್ರಕರಣದಲ್ಲಿ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ ಎಂದರು.