ನವದೆಹಲಿ: ಅನರ್ಹತೆಗೊಂಡು ಸೋತಿದ್ದ ಶಾಸಕರು ಈಗ ಸುಪ್ರೀಂ ತೀರ್ಪಿನಿಂದ ಗೆದ್ದಿದ್ದು ಉಪಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ.
ಈ ಕುರಿತು ಕೋರ್ಟ್ ಆವರಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನರ್ಹ ಶಾಸಕ ಎಚ್.ವಿಶ್ವನಾಥ್, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ನಮಗೆ ಸಂತಸವಾಗಿದೆ. ಸುಪ್ರೀಂ ಕೋರ್ಟ್ ನಮಗೆ ದೊಡ್ಡ ಅವಕಾಶ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್
ನಾವು ಬೇಕಾದಷ್ಟು ಬೇಡಿಕೆ ಇಟ್ಟಿರುತ್ತೇವೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು ಗೊಂದಲ ಬಗೆಹರಿದಿದೆ ಎಂದರು.
ಸ್ಪೀಕರ್ ಕಾಂಗ್ರೆಸ್, ಜೆಡಿಎಸ್ ಜೊತೆಗೂಡಿಕೊಂಡು ನಮ್ಮ 17 ಜನರನ್ನು, ಮೂರೂವರೆ ವರ್ಷಗಳ ಕಾಲ ಕರ್ನಾಟಕ ರಾಜಕೀಯದಿಂದ ದೂರ ಮಾಡಲು ಹುನ್ನಾರ ನಡೆಸಿದ್ದರು. ಆದರೆ ಆ ಹುನ್ನಾರವನ್ನು ಸುಪ್ರೀಂ ಕೋರ್ಟ್ ಕಡೆಗಣಿಸಿದೆ. ಈಗ ಮತ್ತೆ ಸ್ಪರ್ಧಿಸಿ ಗೆದ್ದು, ಕ್ಷೇತ್ರವನ್ನು ಪ್ರತಿನಿಧಿಸುವುದಕ್ಕೆ ಅವಕಾಶ ನೀಡಿದೆ. ಕೆಲವರು ನಮ್ಮ ರಾಜಕೀಯ ಭವಿಷ್ಯವೇ ಮುಗಿಯಿತು. ಇನ್ನು ಮೂರೂವರೆ ವರ್ಷ ಚುನಾವಣೆಗೆ ಸ್ಪರ್ಧಿಸಲು ಆಗುವುದಿಲ್ಲ. ಅನರ್ಹ ಶಾಸಕರು ಮೂಲೆಗುಂಪಾದರು ಎನ್ನುವಂತಹ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದಂತಾಗಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಸ್ಪರ್ಧಿಸುವ ಕುರಿತು ಇನ್ನಷ್ಟೇ ನಿರ್ಧರಿಸಬೇಕಿದೆ. ನಾನು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುದೋ ಅಥವಾ ಇಲ್ಲವೋ ಎಂಬುದರ ಕುರಿತು ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ಎಲ್ಲರೂ ಸೇರಿ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.