ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನತಾ ದರ್ಶನದ ಸರಿಯಾದ ಮಾಹಿತಿ ಸಿಗದೆ ಇಬ್ಬರು ಅಂಗವಿಕಲರು ಪರದಾಡುತ್ತಿರುವ ಘಟನೆ ಸಿಎಂ ನಿವಾಸದ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಂಜುನಾಥ್ ಎಂಬ ಎರಡು ಕಾಲುಗಳಿಲ್ಲದ ಅಂಗವಿಕಲ ಸಿಎಂರ ಜನತಾ ದರ್ಶನಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿಯವರ ಜೆಪಿ ನಗರದ ನಿವಾಸಕ್ಕೆ ಬಂದಾಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ತೆರಳುವಂತೆ ಹೇಳಿದ್ದಾರೆ.
ಜನತಾ ದರ್ಶನದ ಮಾಹಿತಿ ನೀಡುವ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಇಲ್ಲ. ಅಂಗವಿಕಲರ ವಾಹನಕ್ಕೆ ಮನವಿ ಸಲ್ಲಿಸಲು ಬಂದ್ದಿದ್ದು, ರಾತ್ರಿಯಿಡಿ ಪ್ರಯಾಣ ಮಾಡಿ ಮೆಜೆಸ್ಟಿಕ್ನಿಂದ ಜೆಪಿ ನಗರದ ಸಿಎಂ ನಿವಾಸಕ್ಕೆ 350 ರೂ. ಆಟೋ ಚಾರ್ಜ್ ನೀಡಿ ಬಂದಿದ್ದೇನೆ. ಆದರೆ ಇಲ್ಲಿ ಸಿಎಂ ಕುಮಾರಸ್ವಾಮಿ ಆಗಲಿ ಅಥವಾ ಜನತಾ ದರ್ಶನದ ಸಿಬ್ಬಂದಿಯಾಗಲಿ ಇಲ್ಲ. ಈಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ಆದರೆ ಆಟೋಕ್ಕೆ ಹೋಗಲು ನನ್ನ ಬಳಿ ಹಣವಿಲ್ಲ. ಅಂಗವಿಕಲನಾದ ನಾನು ಎರಡು ಬಸ್ ಬದಲಿಸಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅಲ್ಲದೇ ಎರಡು ದಿನಗಳಿಂದ ಮತ್ತೊಬ್ಬ ಅಂಗವಿಕಲರು ಸಿಎಂ ದರ್ಶನ ಪಡೆಯಲು ಅಲೆದಾಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗಲು ಹೇಳುತ್ತಿದ್ದಾರೆ. ನನಗೆ ಗೃಹ ಕಚೇರಿ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸಿಎಂ ಜನತಾ ದರ್ಶನದ ಸಿಬ್ಬಂದಿಯು ನಾಪತ್ತೆಯಾಗಿದ್ದು, ಸರಿಯಾದ ಮಾಹಿತಿ ಸಿಗದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿವಾಸ ಮತ್ತು ಗೃಹ ಕಚೇರಿ ಕೃಷ್ಣಾಕ್ಕೆ ಸಾರ್ವಜನಿಕರು ಅಲೆದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.