ಬೆಂಗಳೂರು: ದುಬೈ ಪ್ರವಾಸದಿಂದ ವಾಪಾಸ್ಸಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ಬಾಹುಬಲಿ-2 ಚಿತ್ರ ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕ ವಿಜಯಪ್ರಸಾದ್ ಅವರು ಸಿಎಂ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಗರಂ ಆಗಿ ಪೋಸ್ಟ್ ಹಾಕಿದ್ದಾರೆ.
ಸಿಎಂ ವಿರುದ್ಧ ವಿಜಯಪ್ರಸಾದ್ ಹೇಳಿದ್ದೇನು?
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ ನಮಸ್ಕಾರಗಳು, ನನ್ನ ಒಲವು ಮತ್ತು ಬೆಂಬಲ ಬಿಜೆಪಿಗೇ ಇದ್ದರೂ ನೀವು ಮುಖ್ಯಮಂತ್ರಿ ಆದಾಗ ಸಂತೋಷಪಟ್ಟಿದ್ದೆ ಜೊತೆಗೆ ಬಹಳಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದೆ. ಯಾಕೆಂದರೆ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುವುದಲ್ಲದೇ, ಬದುಕನ್ನ ತುಂಬಾ ತಳಮಟ್ಟದಿಂದ ನೋಡಿರುವರು. ಹಾಗಾಗಿ ಬದುಕಿನ ಬವಣೆಗಳನ್ನ ಬಹಳ ಹತ್ತಿರದ ಜೊತೆಗೆ ಸ್ಷಷ್ಟವಾಗಿ ನೋಡಿರುವ ನಿಮ್ಮಿಂದ ಹೆಚ್ಚಿನದೇ ನಿರೀಕ್ಷೆ ಮಾಡಿದ್ದೆ. ಆದರೆ ಆಗಿದ್ದು ನಿರಾಸೆ ಮಾತ್ರ.
ಇರಲಿ, ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ಚಲನಚಿತ್ರ ಪ್ರದರ್ಶನ ದರ 200/- ರೂ ನಿಗದಿ ಮಾಡಿ ಅದನ್ನ ಜಾರಿಗೆ ತರುವ ಬಗ್ಗೆ ಸರಿಯಾದ ಸ್ಪಷ್ಟತೆಯೂ ನೀಡದೆ ಈಗ ನೀವೇ 1050/- ರೂ ನೀಡಿ ಬಾಹುಬಲಿ 2 ಚಿತ್ರವನ್ನ ಮಲ್ಟಿಪ್ಲೇಕ್ಸ್ ನಲ್ಲಿ ಚಿತ್ರ ವೀಕ್ಷಣೆ ಮಾಡಿರುವ ಸುದ್ದಿ ಬಂದಿದೆ….!
ನೀವು ಪರಭಾಷೆ ಚಿತ್ರ ನೋಡಿದಿರಿ ಎಂದು ಬೇಸರವಿಲ್ಲ, ಆದರೆ ಅದಕ್ಕೆ ನೀವು ಪಾವತಿಸಿರುವ ಟಿಕೆಟ್ ದರ ಹಾಗೆ ಮಲ್ಟಿಪ್ಲೆಕ್ಸ್ ದರದ ಬಗ್ಗೆ ಹೊರಡಿಸಿರುವ ಆದೇಶ ಜಾರಿಗೆ ಬರುವ ಮೊದಲೇ ಚಿತ್ರ ವೀಕ್ಷಣೆ ಮಾಡಿದ್ದು ತುಂಬಾ ನೋವಾಗಿದೆ.
ಇದನ್ನೂ ಓದಿ: Exclusive 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ
ಮೊದಲೇ ಕನ್ನಡ ಚಿತ್ರರಂಗ ಮತ್ತು ಕನ್ನಡ ಚಿತ್ರಗಳು ಎಂತಹ ಸ್ಥಿತಿಯಲ್ಲಿದೆಯೆಂದು ನಿಮಗೇ ತಿಳಿದಿದೆ. ಹೀಗಿರುವಾಗ ನೀವೇ ಹೀಗೆ ಮಾಡಿದರೆ ಹೇಗೆ?
ಜನತೆಯ `ಕೈ’ ಹಿಡಿಯಬೇಕಾದ ನೀವೇ `ಕೈ’ ಬಿಟ್ಟರೆ ಹೇಗೆ?
ಯಾಕೆ ಏನಾಗಿದೆ ನಿಮಗೆ? ಕನ್ನಡ ಮಣ್ಣಿನ, ಕನ್ನಡ ಚಿತ್ರರಂಗದ, ಕನ್ನಡಿಗರ ತೇಜೋವಧೆ, ಲೂಟಿತನ ಎಲ್ಲಾ ಕಡೆಯಿಂದಲೂ, ಎಲ್ಲರಿಂದಲೂ ಇನ್ನೆಷ್ಟು ಆಗಬೇಕು?
ಎಲ್ಲಾ ಸಾಮಾರ್ಥ್ಯ ಇರುವ ನೀವು ಅರ್ಥಪೂರ್ಣ ಮತ್ತು ಖಡಕ್ ನಿರ್ಧಾರಗಳಿಂದ ಜನತೆಯ `ಕೈ’ ಹಿಡಿಯಿರಿ. ಇದೇ ನನ್ನ ಕೋರಿಕೆ. ಬೇಸರವಾಗಿದ್ದರೇ ಕ್ಷಮೆ ಇರಲಿ. ಪ್ರಮಾಣಿಕವಾಗಿ ನಾಡು ಕಟ್ಟಲು ಯಾವ ಪಕ್ಷವಾದರೇನು, ಯಾರಾದರೇನು ಅಲ್ಲವೇ ? ಇದೆಲ್ಲದರ ಮಧ್ಯೆ ನೀವು ಬಿಡುವು ಮಾಡಿಕೊಂಡು ಕನ್ನಡ ಚಲನಚಿತ್ರ `ನಿರುತ್ತರ’ ನೋಡಿರುವುದು ಮತ್ತು ಶ್ಲಾಘಿಸಿರುವುದು ನಿಜಕ್ಕೂ ಸ್ವಾಗತಾರ್ಹ.