ಅಪ್ಪು ನಟಿಸಬೇಕಿದ್ದ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ಹೀರೋ

Public TV
3 Min Read
puneeth rajkumar

ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಇದೀಗ `ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ನವಿರಾದ ಪ್ರೇಮಕಥೆಯನ್ನ ತೆರೆಯ ಮೇಲೆ ಹೇಳಲು ರೆಡಿಯಾಗಿದ್ದಾರೆ. ಈ ಹಿಂದೆ ಅಪ್ಪು ಇಷ್ಟಪಟ್ಟಿದ್ದ ಕಥೆಯಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ.

appu

`ಒಂದು ಸರಳ ಪ್ರೇಮಕಥೆ’ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಮಾ.08ರಂದು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಿಂಪಲ್ ಸುನಿ ನಿರ್ದೇಶನದ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷವಾದ ಹಿನ್ನೆಲೆಯಲ್ಲಿ `ಒಂದು ಸರಳ ಪ್ರೇಮ ಕತೆ’ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ 2 ವರ್ಷಗಳ ಹಿಂದೆ ನಡೆದ ಅಪ್ಪು ಜೊತೆಗಿನ ಸಂಭಾಷಣೆ ಬಗ್ಗೆ ಸಿಂಪಲ್ ಸುನಿ ಹಂಚಿಕೊಂಡಿದ್ದಾರೆ.‌ ಸುನಿ ರಚಿಸಿದ ಸ್ಟೋರಿಯನ್ನ ಅಪ್ಪು ಮೆಚ್ಚಿಕೊಂಡಿದ್ದರು. ಈ ಬಗ್ಗೆ ಸುನಿ ಮಾತನಾಡಿದ್ದಾರೆ. ಇದನ್ನೂ ಓದಿ: ತಾಯಿ ದೀಪಾ ಅಯ್ಯರ್ ಡ್ರೆಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರಿಗೆ ಬೆಂಡೆತ್ತಿದ ಸಾನ್ಯ

FotoJet 30

ಈ ಸಿನಿಮಾದ ಕತೆಯನ್ನು ಪುನೀತ್ ರಾಜ್‌ಕುಮಾರ್ ಇಷ್ಟಪಟ್ಟಿದ್ದರು. ಮೊದಲು ನಾಲ್ಕು ಸಾಲಲ್ಲಿ ಕತೆ ಹೇಳಿದ್ದೆ ಆಗ ಅಪ್ಪು ಸರ್ ಒಪ್ಪಿದ್ದರು. ಕತೆಯನ್ನು ಡೆವೆಲಪ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ದುರ್ಘಟನೆ ಸಂಭವಿಸಿತು. ಈಗ ಅದೇ ಕತೆಯಲ್ಲಿ ವಿನಯ್ ರಾಜ್‌ಕುಮಾರ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಸುನಿ ತಿಳಿಸಿದ್ದಾರೆ. ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಒಂದು ಸರಳ ಪ್ರೇಮಕಥೆ. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್, `ರಾಧಾ ಕೃಷ್ಣ’ ಧಾರಾವಾಹಿ ನಟಿ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ.

FotoJet 1 13

ನಟ ವಿನಯ್ ರಾಜ್ ಕುಮಾರ್ ಮಾತನಾಡಿ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಈ ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

FotoJet 3 6

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ʻಸಿಂಪಲ್ಲಾಗ್ ಒಂದ್ ಲವ್ ಸ್ಟೋರಿʼಗೆ ಇಟ್ಟ ಮೊದಲ ಟೈಟಲ್ ʻಒಂದು ಸರಳ ಪ್ರೇಮಕಥೆʼ. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಒಕೆ ಮಾಡಿದರು. ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ. ಜ.23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇವತ್ತು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50%ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿದ್ದು, ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *