ಬಾಗಲಕೋಟೆ: ಸ್ಯಾಂಡಲ್ ವುಡ್ ನ ನಿರ್ದೇಶಕ ಪವನ್ ಒಡೆಯರ್ ಇಂದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರ ಮದುವೆ ಅದ್ದೂರಿಯಾಗಿ ನೆರವೇರಿದೆ. ಇವರಿಬ್ಬರ ಮದುವೆ ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದ್ದು, ಪವನ್ ಒಡೆಯರ್ ಹಿರಿಯ ಸಮ್ಮುಖದಲ್ಲಿ ಇಂದು ಬೆಳಗ್ಗೆ 9.05 ಶುಭ ಮುಹೂರ್ತದಲ್ಲಿ ನಟಿ ಅಪೇಕ್ಷಾ ಪುರೋಹಿತ್ ತಾಳಿ ಕಟ್ಟಿ ಮದುವೆಯಾಗಿದ್ದಾರೆ.
ಭಾನುವಾರ ಆರತಕ್ಷತೆ ಕಾರ್ಯಕ್ರಮ ಸಹ ಅದ್ಧೂರಿಯಾಗಿ ನೆರವೇರಿದೆ. ಪವನ್ ಒಡೆಯರ್ ಮತ್ತು ಅಪೇಕ್ಷಾ ಅವರ ಮದುವೆಗೆ ನಟ ಪುನೀತ್ ರಾಜ್ ಕುಮಾರ್ ಬಂದಿದ್ದು, ನವವಧು-ವರರಿಗೆ ಶುಭ ಹಾರೈಸಿದ್ದಾರೆ. ಇದೇ ತಿಂಗಳು ಬೆಂಗಳೂರಿನಲ್ಲಿ ಸಿನಿಮಾರಂಗದವರಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಚಿಸಲಾಗಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯ ಹರಿಪ್ರಿಯಾ ಹೋಟೆಲ್ನಲ್ಲಿ ನೆರವೇರಿತ್ತು. ಇಬ್ಬರ ಕುಟುಂಬದ ಆಪ್ತರ ಮಧ್ಯೆ ಸರಳವಾಗಿ ನಿಶ್ಚಿತಾರ್ಥ ನಡೆದಿದ್ದು, ಪರಸ್ಪರ ಇಬ್ಬರು ಉಂಗುರವನ್ನು ಬದಲಾಯಿಸಿಕೊಂಡಿದ್ದರು.
ನಿರ್ದೇಶಕ ಪವನ್ ಒಡೆಯರ್ `ರಣವಿಕ್ರಮ’, `ನಟರಾಜ ಸರ್ವಿಸ್’, `ಗೂಗ್ಲಿ’ ಹಾಗೂ `ಗೋವಿಂದಾಯ ನಮಃ’ ಸಿನಿಮಾಗಳನ್ನು ಮಾಡಿದ್ದಾರೆ. ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ `ನಟ ಸಾರ್ವಭೌಮ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಡುಗಡೆಗೊಂಡ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv