ಬೆಲ್ ಬಾಟಮ್ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ (Jayathirtha) ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಬಾರಿ ಅವರು ನೈಜ ಘಟನೆಯನ್ನು ಆಧರಿಸಿದ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 1983ರಲ್ಲಿ ನಡೆದ ರೋಚಕ ಘಟನೆಯನ್ನು ತಮ್ಮ ಹೊಸ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು 1983 ಸೆಪ್ಟೆಂಬರ್ 13 ರಂದು ಮಧ್ಯಾಹ್ನ 3.20ಕ್ಕೆ ಬೆಂಗಳೂರಿಗರನ್ನೇ ಬೆಚ್ಚಿಬೀಳಿಸಿದ ಘಟನೆ ಇದಾಗಿದೆಯಂತೆ. ಈ ಘಟನೆ ನಡೆದರೂ, ಆಕೆ ಕೈವನಿಗಾಗಿ ಕಾಯುತ್ತಿದ್ದಳು ಎಂದು ಕುತೂಹಲದ ಟ್ಯಾಗ್ ಲೈನ್ ಕೂಡ ನೀಡಿದ್ದಾರೆ.
ಅಂದಹಾಗೆ ಈ ಹೊಸ ಸಿನಿಮಾಗೆ ಕೈವ (Kaiva) ಎಂದು ಹೆಸರಿಟ್ಟಿರುವ ನಿರ್ದೇಶಕರು, ಆ ಘಟನೆ ನಡೆದಾಗ ಆಕೆ ಕೈವನಿಗಾಗಿ ಕಾಯುತ್ತಿದ್ದಳು. ಅವನು ಬಂದೇ ಬರುತ್ತಾನೆ ಎನ್ನುವ ನಂಬಿಕೆ ಆಕೆಗಿತ್ತು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಕೈವ ಚಿತ್ರದ ಫಸ್ಟ್ ಲುಕ್ ರಿಲೀಸ್ ಮತ್ತು ಮುಹೂರ್ತ ಸಮಾರಂಭ ಇಂದು ನಡೆದಿದ್ದು, ಕಂಠೀರವ ಸ್ಟುಡಿಯೋ ಬಳಿ ಇರುವ ಡಾ.ರಾಜ್ ಕುಮಾರ್ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್
ಬಜಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಧನ್ವೀರ್ (Dhanvir) ಈ ಚಿತ್ರಕ್ಕೆ ನಾಯಕ. ಇಂದು ಇವರ ಹುಟ್ಟು ಹಬ್ಬವೂ ಆಗಿರುವುದರಿಂದ ಹೊಸ ರೀತಿಯ ಗಿಫ್ಟ್ ನೀಡಿದ್ದಾರೆ ಜಯತೀರ್ಥ. 1983ರ ಕಾಲಘಟ್ಟದಲ್ಲಿ ಈ ಕಥೆ ನಡೆಯುವುದರಿಂದ ಬೆಂಗಳೂರನ್ನು ಮರುಸೃಷ್ಟಿ ಮಾಡಲಾಗುತ್ತಿದೆಯಂತೆ. ಅಲ್ಲದೇ, ಕರಗ ಸೇರಿದಂತೆ ಬೆಂಗಳೂರಿನ ಸಂಪ್ರದಾಯಿಕ ಉತ್ಸವವನ್ನು ಚಿತ್ರಕ್ಕಾಗಿ ಬಳಕೆ ಮಾಡಲಾಗುತ್ತಿದೆಯಂತೆ.
ಈ ಘಟನೆ ತಿಗಳರ ಪೇಟೆಯಲ್ಲಿ ನಡೆದಿರುವುದರಿಂದ, ಸಂಪೂರ್ಣವಾಗಿ ಈ ಪೇಟೆಯ ಸುತ್ತಮುತ್ತಲು ಕಥೆ ಇರಲಿದೆಯಂತೆ. ಧ್ವನಿರ್ ನಾಯಕನಾಗಿ ನಟಿಸುತ್ತಿದ್ದರೆ, ಮೇಘಾ ಶೆಟ್ಟಿ (Megha Shetty) ನಾಯಕಿಯಂತೆ. ಈ ಜೋಡಿ ರೆಟ್ರೊ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಬಡತನದ ಜೋಡಿಯೊಂದು, ಶ್ರೀಮಂತರ ಕಿರುಕುಳಕ್ಕೆ ಹೇಗೆ ತಿರುಗಿ ಬೀಳುತ್ತಾರೆ ಎನ್ನುವುದೇ ಸಿನಿಮಾದ ಕಥೆ.