ಬೆಂಗಳೂರು: ಮಠ ಖ್ಯಾತಿಯ ಗುರುಪ್ರಸಾದ್ (Guruprasad) ಸಾವಿನ ಬೆನ್ನಲ್ಲೇ ನಾಲ್ಕು ಅನುಮಾನಗಳು ಎದ್ದಿದೆ.
ಗುರುಪ್ರಸಾದ್ ಅವರು ಮಾದನಾಯಕಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಅನುಮಾನ 1 – ಸಾಲಗಾರರ ಕಾಟ
ಸದ್ಯ ಸಿಕ್ಕಿದ ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು ಮೂರು ಕೋಟಿ ರೂ.ನಷ್ಟು ಸಾಲವನ್ನು ಗುರುಪ್ರಸಾದ್ ಮಾಡಿಕೊಂಡಿದ್ದರು. ಸಾಲಗಾರರ ಹಣ ಪಾವತಿಸುವಂತೆ ಕೇಳುತ್ತಿದ್ದಂತೆ ಗುರುಪ್ರಸಾದ್ ಪದೇ ಮನೆ ಬದಲಾವಣೆ ಮಾಡುತ್ತಿದ್ದರು. ಸಾಲ ನೀಡಿದವರು ಹಲವು ಪ್ರಕರಣವನ್ನು ದಾಖಲಿಸಿದ್ದರು. ರಂಗನಾಯಕ ಸಿನಿಮಾ ಸೋತಿದ್ದು ಗುರುಪ್ರಸಾದ್ ಅವರಿಗೆ ಭಾರೀ ಸಂಕಷ್ಟ ತಂದಿಟ್ಟಿತ್ತು. ಇದನ್ನೂ ಓದಿ: ವರ್ಷದಲ್ಲಿ ಮೂರು ಮನೆಯನ್ನು ಬದಲಿಸಿದ್ದ ಗುರುಪ್ರಸಾದ್
ಅನುಮಾನ 2 – ಸಿನಿಮಾ ಬಿಡುಗಡೆಗೆ ಒದ್ದಾಟ
ಯಶಸ್ವಿ ನಿರ್ದೇಶಕನಾಗಿದ್ದರೂ ಸಿನಿಮಾ ಬಿಡುಗಡೆಗೆ ಒದ್ದಾಟ ನಡೆಸುತ್ತಿದ್ದರು. ಎದ್ದೇಳು ಮಂಜುನಾಥ 2 (Eddelu Manjunatha) ಚಿತ್ರೀಕರಣ ಮುಕ್ತಾಯವಾಗಿ ಎರಡು ವರ್ಷವಾಗಿದ್ದರೂ ಬಿಡುಗಡೆ ಆಗಿರಲಿಲ್ಲ. ಈ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ಗುರುಪ್ರಸಾದ್ ಅಭಿನಯಿಸಿದ್ದರು. ಈ ಸಿನಿಮಾ ನಿರ್ಮಾಣ ಬಿಡುಗಡೆಗಾಗಿ ಕೋಟ್ಯಂತರ ರೂ. ಸಾಲ ಮಾಡಿದ್ದರು.
ಅನುಮಾನ 3 – ಬಂಧನ ಭೀತಿ
ಸಾಲ ವಾಪಸು ನೀಡದ ಪ್ರಕರಣದಲ್ಲಿ ಗುರುಪ್ರಸಾದ್ ಅವರನ್ನು ಈ ವರ್ಷದ ಜನವರಿಯಲ್ಲಿ ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದರು. ಅರೆಸ್ಟ್ ಆಗುವ ಭಯದಲ್ಲಿ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ. ಇದನ್ನೂ ಓದಿ: ಕುಡಿತದ ಚಟಕ್ಕೆ ಬಿದ್ದಿದ್ದ, ಪದೇ ಪದೇ ಸಾಯುತ್ತೇನೆ ಎಂದಿದ್ದ: ಗುರುಪ್ರಸಾದ್ ಬಗ್ಗೆ ಜಗ್ಗೇಶ್ ಮಾತು
ಅನುಮಾನ 4 – ಕೌಟುಂಬಿಕ ಕಲಹ
ಇತ್ತೀಚೆಗೆ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ ಮೊದಲ ಪತ್ನಿಯಿಂದ ದೂರವಾಗಿ ಎರಡನೇ ಮದುವೆಯಾಗಿದ್ದರು. ಎರಡನೇ ಮದುವೆಯಾಗಿದ್ದರೂ ಗುರುಪ್ರಸಾದ್ ಪ್ರತ್ಯೇಕವಾಗಿ ಅಪಾರ್ಟ್ಮೆಂಟ್ನಲ್ಲಿ ವಾಸಗಿದ್ದರು. ಕೊನೆ ದಿನಗಳಲ್ಲಿ ಏಕಾಂಗಿಯಾಗಿದ್ದ ಗುರುಪ್ರಸಾದ್ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.