ಬೆಂಗಳೂರು: ಒಂದು ಸಿನಿಮಾವನ್ನು ಒಂದು ಬಾರಿ ನೋಡಬಹುದು. ತುಂಬಾ ಇಷ್ಟವಾದರೆ ಐದಾರು ಬಾರಿ ನೋಡಬಹುದು. `ರಾಜರಥ’ ಸಿನಿಮಾ ಶುಕ್ರವಾರದಂದು ರಾಜಾದ್ಯಂತ ಬಿಡುಗಡೆಯಾಗಿದ್ದು, ನಟರೊಬ್ಬರು ಈ ಸಿನಿಮಾವನ್ನ ಐದು ಸಾವಿರ ಬಾರಿ ನೋಡಿದ್ದಾರೆ.
`ರಾಜರಥ’ ಚಿತ್ರವನ್ನು ಐದು ಸಾವಿರ ಬಾರಿ ನೋಡಿದವರು ಬೇರೆ ಯಾರು ಅಲ್ಲ, ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ. ಅನೂಪ್ ಸಿನಿಮಾದ ಚಿತ್ರದ ಬಿಡುಗಡೆಗೆ ಮುಂಚೆ ಮಾತನಾಡಿ ರಂಗಿತರಂಗ ಸಿನಿಮಾಕ್ಕಿಂತ ರಾಜರಥ ಸಿನಿಮಾಗೆ ಹೆಚ್ಚು ಕಷ್ಟಪಟ್ಟಿದ್ದೇನೆ. ಎರಡು ವರ್ಷ ಈ ಸಿನಿಮಾಗಾಗಿ ಮೀಸಲಿಟ್ಟಿದ್ದೇನೆ. ಇದುವರೆಗೆ ಐದು ಸಾವಿರ ಸಲ ಸಿನಿಮಾ ನೋಡಿದರೂ ನನಗೆ ಬೋರ್ ಆಗಲಿಲ್ಲ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.
ರಾಜರಥ ಎಂಬ ಹೈಟೆಕ್ ಬಸ್ ನಲ್ಲಿ ಚೆನ್ನೈಗೆ ಹೊರಟಿರುವ ಪ್ರಯಾಣಿಕರ ಕಥೆಯೇ ಈ ಸಿನಿಮಾ. ಬಸ್ ನಲ್ಲಿ ಪ್ರಯಾಣ ಬೆಳೆಸುವವರ ಪರಿಚಯ ಒಂದೆಡೆ ಆದರೆ, ಇದ್ದಕ್ಕಿದ್ದಂತೆ ಭುಗಿಲೇಳುವ ಹಿಂಸಾಚಾರದ ಹಿನ್ನಲೆ ಇನ್ನೊಂದು ಕಡೆ. ಹಿಂಸಾಚಾರದಲ್ಲಿ ಪ್ರಯಾಣಿಕರು ಸೇಫ್ ಆಗುತ್ತಾರಾ, ಇಲ್ವಾ ಎಂಬುದು ಕ್ಲೈಮ್ಯಾಕ್ಸ್ ಆಗಿದೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.