ಮಹಿಳೆಯರ ಬಗ್ಗೆ ಅಗೌರವ ಹೇಳಿಕೆ-ಈಶ್ವರಪ್ಪ ಮೇಲೆ ಗುಂಡೂರಾವ್ ಕೆಂಡಾಮಂಡಲ

Public TV
1 Min Read
dinesh gundurao 1

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯರ ಮೊಮ್ಮಗಳ ಬಗ್ಗೆ ಅಗೌರವದಿಂದ ಮಾತನಾಡಿದ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಂಡಾಮಂಡಲರಾಗಿದ್ದಾರೆ.

ಈಶ್ವರಪ್ಪನ ಕೊಳಕು ಮನಸ್ಥಿತಿ ಅರ್ಥವಾಗುತ್ತಿಲ್ಲ. ಬಿಜೆಪಿಯವರು ಯಾಕೆ ಇನ್ನು ಅವರನ್ನ ಇಟ್ಟುಕೊಂಡಿದ್ದಾರೆ ಅಂತ ಗೊತ್ತಿಲ್ಲ. ಈ ಮಟ್ಟದಲ್ಲಿ ಬಿಜೆಪಿಯವರು ಇವತ್ತು ಮಾತಾಡ್ತಾರೆ ಅಂದರೆ ಅವರಿಗೆ ಯಾವ ಸಂಸ್ಕೃತಿ, ಸಂಸ್ಕಾರನು ಇಲ್ಲ. ಇದೇನು ಮಾತಾಡುವಂತಹ ಮಾತುಗಳಾ? ಈಶ್ವರಪ್ಪನಿಗೆ ಮಾನ ಮರ್ಯಾದೆ ಏನಾದರೂ ಇದೇಯಾ ಅಂತ ಆಶ್ಚರ್ಯ ಆಗುತ್ತೆ. ಜನ ಇದನ್ನ ಗಮನಿಸ್ತಾರೆ ಬಿಜೆಪಿ ಏನು ಅಂತ ಇದರಲ್ಲೇ ಗೊತ್ತಾಗುತ್ತಿದೆ. ರಾಜಕೀಯವಾಗಿ ಎದುರಾಳಿಗಳನ್ನ ಟೀಕೆ ಮಾಡಬೇಕು ಆದ್ರೆ ವ್ಯಕ್ತಿಗತವಾಗಿ ಟೀಕೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.

dinesh gundurao

ಯಾರದ್ದೇ ಮಗಳಾಗಲಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿಯ ಟೀಕೆ ಮಾಡಬಾರದು. ಈಶ್ವರಪ್ಪ ಹೇಳಿಕೆ ನೋಡಿದರೆ ಹೆಣ್ಣುಮಕ್ಕಳ ಬಗ್ಗೆ ಇರುವ ಅಗೌರವತನ ತೋರಿಸುತ್ತೆ. ಭಾರತ ಮಾತೆ ಅಂತ ಹೇಳುವ ಇವರು ಭಾರತ ಮಾತೆಗೆ ಅಗೌರವ ತೋರಿಸುತ್ತಿದ್ದಾರೆ. ಬಿಜೆಪಿಗೆ ನೈತಿಕತೆ ಇದ್ದರೆ ಯಡಿಯೂರಪ್ಪ ಈಶ್ವರಪ್ಪ ಅವರಿಗೆ ಛೀಮಾರಿ ಹಾಕಬೇಕು. ಯಡಿಯೂರಪ್ಪನವರಿಗೆ ತಾಖತ್ ಇದ್ರೆ ಕ್ರಮಕೈಗೊಳ್ಳಿ ಇಲ್ಲಾ ಅಂದರೆ ಬಾಯಿ ಮುಚ್ಚುಕೊಂಡು ಇರಬೇಕು ಎಂದು ಹರಿಹಾಯ್ದರು.

K.S.Eshwarappa Siddu

ಈಶ್ವರಪ್ಪ ಹೇಳಿದ್ದೇನು?
ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾಗಿದ್ದರೆ ಏನ್ಮಾಡ್ತೀಯಾ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಘಟನೆಯಿಂದ ನನಗೆ ತುಂಬಾ ದುಃಖ ತಂದಿತ್ತು. ನನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದಷ್ಟು ನೋವಾಗಿತ್ತು. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಏನ್ ಮಾಡಬೇಕು ಈವಾಗ ಅಂದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

Share This Article