ಉಡುಪಿ: ಮೈಸೂರು ಕಾರ್ಯಕ್ರಮಕ್ಕೆ ಸಿಎಂ ಗೆ ಆಹ್ವಾನ ನೀಡದೇ ಇರುವುದು ಮೋದಿಯವರ ಸಣ್ಣತನ. ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯವರಿಗೆ ಆಹ್ವಾನ ನೀಡದಿರುವುದು ಪ್ರಧಾನಿ ಮೋದಿಯವರ ಸಣ್ಣತನ ತೋರಿಸುತ್ತದೆ ಅಂತ ಹೇಳಿದ್ರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಮಿತ್ ಶಾ ಅವರು ಮೂರ್ನಾಲ್ಕು ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಈ ಬಾರಿಯಾದರೂ ಸತ್ಯ ಮಾತನಾಡಲಿ. ಶಾ ಮಾತು ಕೋಮು ಭಾವನೆ ಕೆರಳಿಸದಿರಲಿ. ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತಬೇಡಿ. ನಮ್ಮ ಸರ್ಕಾರದ ಬಗ್ಗೆ ಸುಳ್ಳು ಆರೋಪ ಬೇಡ. ಅಮಿತ್ ಶಾ ಜವಾಬ್ದಾರಿಯುತವಾಗಿ ಮಾತನಾಡಲಿ ಎಂದರು.
ಹೆದರಿಸಿ ಬೆದರಿಸುವ ರಾಜಕಾರಣ ರಾಜ್ಯಕ್ಕೆ ಬೇಡ. ರಾಜ್ಯ-ದೇಶದ ಹಿತದೃಷ್ಟಿಯಿಂದ ಮಾತನಾಡಲಿ. ರಾಹುಲ್ ಗಾಂಧಿ ಪ್ರವಾಸ ಯಶಸ್ವಿಯಾಗಿದೆ. ದೇವಸ್ಥಾನಕ್ಕೆ ಹೋಗಲು ಯಾರ ಪರವಾನಿಗೆ ಬೇಕಾಗಿಲ್ಲ. ದೇವಸ್ಥಾನ, ಮಸೀದಿ ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ. ಹಿಂದೆಯೂ ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ. ಹಿಂದೂ ಧರ್ಮವನ್ನು ಬಿಜೆಪಿಗೆ ಗುತ್ತಿಗೆ ನೀಡಿಲ್ಲ. ಕೇದರನಾಥಕ್ಕೂ ರಾಹುಲ್ ಪಾದಯಾತ್ರೆ ಮಾಡಿದ್ದಾರೆ. ಹಿಂದೂ ಧರ್ಮ ಬಿಜೆಪಿಗೆ ಮಾತ್ರ ಅಂತ ಭಾವಿಸಿದ್ದಾರೆ. ಬೇರೆ ಪಕ್ಷಕ್ಕೆ ಹಿಂದೂ ಧರ್ಮ ಸಂಬಂಧವಿಲ್ಲದಂತೆ ಮಾತನಾಡ್ತಾರೆ ಅಂತ ಗುಂಡೂರಾವ್ ಕಿಡಿಕಾರಿದ್ರು.
ಕರಾವಳಿ ಪ್ರವಾಸದ ವೇಳೆ ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ. ಚರ್ಚ್, ದರ್ಗಾಕ್ಕೂ ಶಾ ಹೋಗಲಿ ಎಂದರು. ಮೃತರ ಮನೆಗೆ ಅಮಿತ್ ಶಾ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಮೃತ ಮುಸಲ್ಮಾನರ ಮನೆಗೂ ಶಾ ಹೋಗಲಿ. ಸತ್ತವರ ವಿಚಾರದಲ್ಲಿ ಜಾತಿ-ಧರ್ಮ ನೋಡಬೇಡಿ ಅಂತ ಸಿಡಿಮಿಡಿಗೊಂಡರು.