ಬೆಂಗಳೂರು: ಮೈಸೂರು ಕಾಂಗ್ರೆಸ್ಗೆ ಅಂತ ಮೊದಲೇ ತೀರ್ಮಾನಿಸಿದ್ದೇವು. ಆದ್ರೆ ಈಗ ಸಚಿವ ಜಿ.ಟಿ.ದೇವೇಗೌಡರು ಈ ರೀತಿಯ ಗೊಂದಲ ಹಾಗೂ ದ್ವಂದ್ವ ಹೇಳಿಕೆ ಕೊಟ್ಟಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಮೈತ್ರಿ ವಿಚಾರದಲ್ಲಿ ಒಂದು ಕಡೆ ತಪ್ಪಾಗಿಲ್ಲ. ಎರಡು ಕಡೆ ಪಕ್ಷದಿಂದಲೂ ತಪ್ಪಾಗಿದೆ. ಆಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಿತ್ತು ಎಂದು ಸಚಿವ ಜಿ.ಟಿ. ದೇವೇಗೌಡ ಸ್ಫೋಟಕ ಹೇಳಿಕೆಯನ್ನು ಕೊಟ್ಟಿದ್ದರು. ಈ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಶೇ.80 ರಷ್ಟು ಕಡೆ ಮೈತ್ರಿ ಧರ್ಮ ಪಾಲನೆ ಆಗಿದೆ. 10 ರಿಂದ 20 ಶೇಖಡ ಇಂತಹ ಗೊಂದಲಗಳು ಆಗಿರಬಹುದು ಅಷ್ಟೇ. ಮೈಸೂರು, ಚಿತ್ರದುರ್ಗ, ಮಂಡ್ಯ, ಕೋಲಾರ ಕಡೆಗಳಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿವೆ ಅಷ್ಟೇ. ಮೈತ್ರಿಯಲ್ಲಿ ಕೆಲವರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಅನ್ನಿಸುತ್ತೆ. ಮೈತ್ರಿ ಕೊನೆಗಳಿಗೆಯಲ್ಲಿ ಆಗಿದಲ್ಲ ಮೊದಲೇ ತೀರ್ಮಾನ ಆಗಿತ್ತು ಎಂದು ಹೇಳಿ ತಿರುಗೇಟು ನೀಡಿದರು. ಇದನ್ನೂ ಓದಿ:ಮೈತ್ರಿ ವಿಚಾರದಲ್ಲಿ ತಪ್ಪಾಗಿದೆ ಎಂದ ಜಿಟಿಡಿ – ದೋಸ್ತಿಗಳಲ್ಲಿ ಬಿರುಕು?
ಸಿಎಂ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರನ್ನ ವಿಶ್ವಾಸಕ್ಕೆ ತಗೆದುಕೊಳ್ಳಬೇಕಿತ್ತು ಎಂದು ಸಚಿವ ಜಮೀರ್ ಅಹಮದ್ ಹೇಳಿಕೆ ಸರಿಯಾಗಿದೆ. ಅವರು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕಿತ್ತು. ನಾವು ಒಗ್ಗಟ್ಟಿನಿಂದ ಸರಿಯಾಗಿ ಕೆಲಸ ಮಾಡಿದ್ದರೆ 22 ರಿಂದ 24 ಸೀಟು ಗೆಲ್ಲಬಹುದಿತ್ತು. ಆದರೆ ಕೆಲವು ಕಡೆ ಸಣ್ಣ ಪುಟ್ಟ ವ್ಯತ್ಯಾಸ ಆಗಿದೆ. ಕೆಲವರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಅನ್ನಿಸುತ್ತದೆ. ಯಾರು ಜವಾಬ್ದಾರಿ ತೆಗೆದುಕೊಂಡಿದ್ದರೋ ಅವರು ಪ್ರಮಾಣಿಕವಾಗಿ ಕೆಲಸ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವ ವಿಚಾರವನ್ನ ಈಗ ಕೆದುಕುತ್ತಿದ್ದಾರೆ. ಇಷ್ಟೊಂದು ಕೀಳುಮಟ್ಟದ ರಾಜಕಾರಣವನ್ನ ಜನ ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದರು. ಅಲ್ಲದೆ ಕುಂದಗೋಳ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ ಬಂಡಾಯ ಶಮನ ಮಾಡುವಲ್ಲಿ ಸಕ್ಸಸ್ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.