ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರ ಪತ್ನಿ ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
“ಇಂದು ಕರ್ನಾಟಕದಲ್ಲಿ ರಾಜಕೀಯ ಎಂತಹ ದುರಂತ ಪರಿಸ್ಥಿತಿಗೆ ತಲುಪಿದೆ. ಅವಕಾಶವಾದವೂ ಒಂದು ಮಾನದಂಡವಾಗಿದ್ದು, ಅಧಿಕಾರವನ್ನು ಅನುಭವಿಸುವವರು ಈ ರೀತಿ ಕಾಂಗ್ರೆಸ್ಸಿಗೆ ಕೈಕೊಟ್ಟು ಹೋದರೆ ಯಾರನ್ನು ದೂಷಿಸುವುದು. ಇದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ದೂಷಿಸುವುದೇ ಅಥವಾ ಇದು ಕಾಂಗ್ರೆಸ್ಸಿನಲ್ಲಿರುವ ಜನರ ಗುಣಮಟ್ಟ ಎಂದು ಕೊಳ್ಳುವುದೇ?” ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಅಮೆರಿಕ, ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸಕ್ಕೆ ತೆರಳಿದಾಗ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಕಾಂಗ್ರೆಸ್ಸಿನ 10, ಜೆಡಿಎಸ್ನ ಮೂವರು ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಪಟ್ಟಿಗೆ ಮತ್ತಷ್ಟು ಶಾಸಕರು ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಸಿಎಂ ಅಮೆರಿಕದಿಂದ ಬಂದ ಬಳಿಕ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸರ್ಕಾರ ಇರುತ್ತಾ? ಪತನಗೊಳ್ಳುತ್ತಾ ಎನ್ನುವುದು ಗೊತ್ತಾಗಲಿದೆ.