ಸಾವಿನ ನಾಟಕವಾಡಿ ಅಭಿಮಾನಿಗಳ ಶಾಕ್ ಗೆ ಕಾರಣವಾಗಿದ್ದ ಪೂನಂ ಪಾಂಡೆ (Poonam Pandey) ಪರವಾಗಿ ಅವರ ಡಿಜಿಟಲ್ ಟೀಮ್ ಕ್ಷಮೆ ಕೇಳಿದೆ. ಪೂನಂ ಅವರ ಉದ್ದೇಶ ಒಳ್ಳೆಯದಾಗಿತ್ತು. ಆದರೆ, ಆಯ್ಕೆ ಮಾಡಿಕೊಂಡ ಕ್ರಮಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ಟೀಮ್ ಹೇಳಿಕೊಂಡಿದೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದೆ.
ಗರ್ಭಕಂಠ ಕ್ಯಾನ್ಸರ್ (Cervical Cancer) ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿಷಾದ ವ್ಯಕ್ತ ಪಡಿಸಿದ್ದರೂ, ಅವರ ಮೇಲೆ ಎಫ್.ಐ.ಆರ್ (F.I.R) ದಾಖಲಾಗಿದೆ. ಅಲಿ ಕಾಶಿಪ್ ಅನ್ನೋ ವಕೀಲರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೂನಂ ಮತ್ತು ಆಕೆಯ ಮ್ಯಾನೇಜರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಈ ಪ್ರಕರಣದ ಕುರಿತಂತೆ ಪೂನಂ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮಾತ್ರ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಪೂನಂ ಮಾಡಿದ ಕೆಲಸ ಉತ್ತಮವಾದದ್ದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನೀವು ಮಾಡಿದ ಕೆಲಸಕ್ಕೆ ಟೀಕೆಗಳು ಬರಬಹುದು. ಆದರೆ, ನೀವು ಮಾಡಿದ ಕೆಲಸ ಮೆಚ್ಚುವಂಥದ್ದು. ನಿಮ್ಮಿಂದಾಗಿ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ವ್ಯಾಪಕವಾಗಿ ಪ್ರಚಾರ ಸಿಕ್ಕಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರ. ನಿಮಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವರ್ಮಾ ಬರೆದುಕೊಂಡಿದ್ದಾರೆ.