ಬೆಂಗಳೂರು: ಚಂದನವನದಲ್ಲಿ ಮದುವೆ ಸಂಭ್ರಮದ ತಂಗಾಳಿ ಬೀಸುತ್ತಿದೆ. ಇದೇ ತಿಂಗಳು 12ರಂದು ದಿಗಂತ್ ಮತ್ತು ಐಂದ್ರಿತಾ ರೇ ಹಸೆಮಣೆ ಏರಲಿದ್ದಾರೆ. ಮಂಗಳವಾರ ದಿಗಂತ್ ಮತ್ತು ಐಂದ್ರಿತಾರ ಮದುವೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಧ ವಿಧದ ಮದುವೆ ಪತ್ರಿಕೆಯ ಜೊತೆ ಕೆಲ ಡಬ್ಬಗಳು ಸಹ ಫೋಟೋದಲ್ಲಿದ್ದವು. ಅರೇ ಇದೇನಪ್ಪಾ ಪತ್ರದ ಜೊತೆ ಡಬ್ಬ ಅಂತಾ ನೆಟ್ಟಿಗರು ಗೊಂದಲಕ್ಕೆ ಒಳಗಾಗಿದ್ದರು.
ಎರಡ್ಮೂರು ಮದುವೆ ಕರೆಯೋಲೆ ಮುದ್ರಿಸಿದ ಜೋಡಿ ಸ್ಥಳದ ಬಗ್ಗೆಯೂ ನಿಖರ ಮಾಹಿತಿ ನೀಡಿರಲಿಲ್ಲ. ಈಗ ಈ ಎರಡು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಮದುವೆ ಗುರು ಹಿರಿಯರು ನಿಶ್ಚಯಿಸಿದ ದಿನಾಂಕದಂದು ನಂದಿಗಿರಿಧಾಮದ ನಿಸರ್ಗ ಮಡಿಲಿನಲ್ಲಿ ನಡೆಯಲಿದೆ. ಪತ್ರದ ಜೊತೆ ಅತಿಥಿಗಳಿಗೆ ಕೆಲವು ಡಬ್ಬಗಳನ್ನು ನೀಡಿದ್ದು, ಒಂದರಲ್ಲಿ ತೀರ್ಥಹಳ್ಳಿ ಮಿಡಿ ಉಪ್ಪಿನಕಾಯಿ ಮತ್ತೊಂದರಲ್ಲಿ ಬಂಗಾಳದ ಸ್ಪೆಷಲ್ ರಸಗುಲ್ಲಾ ನೀಡಿದ್ದಾರೆ. ಇವುಗಳ ಜೊತೆಗೆ ದಾಸವಾಳದ ಬೀಜಗಳನ್ನು ನೀಡಿದ್ದಾರೆ.
ಕರೆಯೋಲೆ ಪಡೆದ ನಟಿ ಮಾಳವಿಕಾ ಅವಿನಾಶ್ ಟ್ವೀಟ್ ಮಾಡಿದ್ದು, ಇದೂವರೆಗೂ ನೋಡದ ಅಮಂತ್ರಣ ಪತ್ರಿಕೆಯನ್ನು ನೋಡಿದ್ದೇನೆ. ಮರದ ಕೆಲಸವುಳ್ಳ ಸುಂದರ ಟ್ರೇನಲ್ಲಿ ಈ ಎಲ್ಲ ವಸ್ತುಗಳ ಜೊತೆ ಪತ್ರಿಕೆ ನೀಡಿರುವುದು ತುಂಬಾ ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ.
ಈಗಾಗಲೆ ವಿಶ್ವವಿಖ್ಯಾತ ನಂದಿಗಿರಿಧಾಮದ ತಪ್ಪಲಿನ ಡಿಸ್ಕವರಿ ವಿಲೇಜ್ ರೆಸಾರ್ಟ್ ಅನ್ನು ಡಿಸೆಂಬರ್ 10ರಿಂದ 13ರವರೆಗೂ ಸಂಪೂರ್ಣವಾಗಿ ಬುಕ್ ಮಾಡಿಕೊಂಡಿದ್ದಾರೆ. ತಾರಾ ಜೋಡಿಯ ವಿವಾಹಕ್ಕೆ ಕೇವಲ ಕುಟುಂಬಸ್ಥರು-ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಮದುವೆ ಬಳಿಕ ಅಂದ್ರೆ ಡಿಸೆಂಬರ್ 14ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಚಿತ್ರರಂಗದ ಗಣ್ಯರಿಗೆ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಾರೆ. ಈ ವಿಶೇಷ ಔತಣಕೂಟಕ್ಕೆ ಆಗಮಿಸುವ ಅತಿಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವದರ ಜೊತೆಗೆ ಯಾವುದೇ ಗಿಫ್ಟ್ ತರಕೂಡದು ಎಂಬ ಷರತ್ತು ವಿಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv