– ಕಾರವಾರ, ಗೋವಾ ಗಡಿಯಲ್ಲಿ ವಿಚಿತ್ರ ಆಚರಣೆ
ಕಾರವಾರ: ಕೊರೊನ ವೈರಸ್ನಂತಹ ಮಾರಣಾಂತಿಕ ರೋಗಗಳು ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡ್ತಿದೆ. ಇಂತಹ ರೋಗ-ರುಜಿನಗಳು ತಮಗೆ ಬರಬಾರದೆಂಬ ಉದ್ದೇಶದಿಂದ ಊರಿನ ಜನ ತಮ್ಮ ಹೊಟ್ಟೆಗೆ ಸೂಜಿದಾರ ಪೋಣಿಸಿಕೊಂಡ್ರೆ, ಮಹಿಳೆಯರು ತಲೆ ಮೇಲೆ ದೀಪ ಹೊರುವ ಮೂಲಕ ರೋಗ-ರುಜಿನಗಳು ತಮ್ಮ ಹತ್ತಿರಕ್ಕೆ ಸುಳಿಯದಂತೆ ದೇವರಿಗೆ ಹರಕೆ ಸಲ್ಲಿಸೋದು ವಾಡಿಕೆ.
ಹೌದು, ಒಂದೆಡೆ ಗ್ರಾಮದ ಯುವಕರು ಹಾಗೂ ಮಕ್ಕಳು ಮಧು ಮಕ್ಕಳಂತೆ ಶೃಂಗಾರಗೊಂಡು ಹೊಟ್ಟೆಗೆ ಸೂಜಿ ಚುಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರು ಸರತಿ ಸಾಲಲ್ಲಿ ನಿಂತು ಹಣತೆಯನ್ನು ತಲೆ ಮೇಲೆ ಹೊತ್ತು ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ಮಗದೊಂದು ಕಡೆ ಹೂವಿನಿಂದ ಶೃಂಗಾರಗೊಂಡ ಬಂಡಿಯನ್ನು ಎಳೆಯುತ್ತಿರೋ ಗ್ರಾಮದ ಜನ ಈ ದೃಶ್ಯ ಕಾರವಾರದ ಗೋವಾ ಗಡಿಭಾಗದ ಮಾಜಾಳಿ ಗ್ರಾಮದಲ್ಲಿ ಕಂಡು ಬಂದಿದೆ.
ತಮ್ಮ ಗ್ರಾಮದ ಜನ ಮಾರಕ ರೋಗಗಳಿಂದ ಮುಕ್ತಿ ಹೊಂದಿ, ಮುಂದೆ ಯಾವುದೇ ರೀತಿಯ ಸಂಕಷ್ಟಗಳು ಬಾರದಿರಲೆಂದು ಗ್ರಾಮ ದಾಡ್ ದೇವಿಯ ಮಾರ್ಕೆಪೊನಾವ್ ಎನ್ನುವ ವಿಶಿಷ್ಟ ಜಾತ್ರೆಯನ್ನು ಇಲ್ಲಿ ಆಚರಿಸಲಾಗುತ್ತದೆ. ಮಕ್ಕಳಿಗೆ ಚರ್ಮ ಸಂಬಂಧಿ ಹಾಗೂ ಮಾರಕರೋಗ ಬಾರದಂತೆ ಹರಕೆ ಕಟ್ಟಿಕೊಂಡ ಯುವಕರು, ಮಕ್ಕಳು ಹೊಕ್ಕುಳಿಗೆ ಸೂಜಿ ಚುಚ್ಚಿಸಿಕೊಂಡು ಹರಕೆ ತೀರಿಸುತ್ತಾರೆ. ಮದುವೆಯಾದ ಯುವತಿಯರು ಹಾಗೂ ಹೊಸದಾಗಿ ಮದುವೆಯಾದ ಗೃಹಿಣಿಯರು ಮುಂದೆ ಯಾವುದೇ ಕಷ್ಟಗಳು ಬಾರದಿರಲೆಂದು ದೀಪವಿರುವ ಹಣತೆಗಳನ್ನು ತಲೆ ಮೇಲೆ ಹೊತ್ತು ದೇವಿಗೆ ಅರ್ಪಿಸ್ತಾರೆ.
ಈ ದೇವಿಯಲ್ಲಿ ಹರಕೆ ಹೇಳಿಕೊಂಡ್ರೆ ನೆರವೇರುತ್ತೆ ಅನ್ನೋದು ಇಲ್ಲಿನ ಜನರ ನಂಬಿಕೆ. ಹೀಗಾಗಿ ಈ ಜಾತ್ರೆಗೆ ಮಹಾರಾಷ್ಟ್ರ, ಗೋವಾದಿಂದಲೂ ಸಾವಿರಾರು ಜನ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹರಕೆ ತೀರಿಸುತ್ತಾರೆ.