ಉಡುಪಿ: ಶಿರೂರು ಸ್ವಾಮೀಜಿ ವೃಂದಾವನ ಸೇರುತ್ತಿದ್ದಂತೆಯೇ ಅವರ ಬಗೆಗಿನ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
5 ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಇದೀಗ ಶ್ರೀಗಳು ವಿಧಿವಶರಾದ ಬಳಿಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗ್ತಿದೆ. ಈ ಮೂಲಕ ಲಕ್ಷ್ಮೀವರ ತೀರ್ಥರು ಧರ್ಮದೈವವಾದ ಶ್ರೀಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಎಂಬ ಪ್ರಶ್ನೆಗಳನ್ನು ಭಕ್ತರು ಮಾಡುತ್ತಿದ್ದಾರೆ.
ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಸ್ವಾಮೀಜಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದೆ. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದಾರೆ.
ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು.
ಸದ್ಯ ಇದೀಗ ಈ ವೀಡಿಯೋ ಬಹು ಚರ್ಚಿತ ವಿಷಯವಾಗಿದೆ. ದೈವದ ನಡೆಯಲ್ಲಿ ನಡೆಯುವ ಕಟ್ಟು-ಪಾಡುಗಳ ವಿಡಂಬನೆ ಜೀವಹಾನಿಗೆ ಕಾರಣವಾಗಿರಬಹುದು ಎಂದು ದೈವ ಭಕ್ತರು ಹೇಳುತ್ತಿದ್ದಾರೆ.