ಧಾರವಾಡ: ಸಮ್ಮಿಶ್ರ ಸರ್ಕಾರ ಹೇಗೆ ನಡೆಸಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಇದ್ದಷ್ಟು ಅನುಭವ ಬೇರೆ ಯಾರಿಗೂ ಇಲ್ಲ. ಸರ್ಕಾರದಲ್ಲಿರುವ ಗೊಂದಲವನ್ನು ಎರಡೂ ಪಕ್ಷಗಳ ಮುಖಂಡರು ಸರಿ ಮಾಡುತ್ತಾರೆ. ಭವಿಷ್ಯದಲ್ಲಿ ಏನಾಗುತ್ತೋ ಹೇಳೋಕೆ ಆಗಲ್ಲ ಎಂದು ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎನ್.ಎಚ್ ಕೋನರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿಂದು ಆನಂದ್ ಸಿಂಗ್ ರಾಜೀನಾಮೆ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ರಾಜೀನಾಮೆ ವಿಚಾರ ಮಾಧ್ಯಮಗಳ ಮೂಲಕ ನನಗೂ ತಿಳಿದಿದೆ. ಸಿಎಂ ಅಮೆರಿಕದಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಲ್ಲಿಂದಲೇ ಅವರು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ ಎಂದರು.
ಸರ್ಕಾರ ರಚನೆ ಮಾಡುವೆ ಎನ್ನುವುದು ಬಿಜೆಪಿಯವರ ಹಗಲು ಕನಸು ಅಷ್ಟೇ. ಏನೂ ಸಮಸ್ಯೆ ಆಗುವುದಿಲ್ಲ ಎಂದು ಸಿಎಂ ತಿಳಿಸಿದ್ದಾರೆ. ಎಲ್ಲವನ್ನು ಕಾದು ನೋಡಬೇಕಿದೆ. ಎರಡ್ಮೂರು ದಿನದಲ್ಲಿ ಸಿಎಂ ಕರ್ನಾಟಕ್ಕೆ ಬರುತ್ತಾರೆ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕೀಯ ನಿವೃತ್ತಿ ನಿರ್ಧಾರ ಮಾಡಿದ್ದೆ – ಅಮೆರಿಕದಿಂದ ಸಿಎಂ ಹೇಳಿಕೆ
ಆನಂದ್ ಸಿಂಗ್ ಜೊತೆಗೆ ಇತರರು ರಾಜೀನಾಮೆ ಕೊಡುತ್ತಾರೆ ಅನ್ನೋದು ಉಹಾಪೋಹವಾಗಿದೆ. ಉಹಾಪೋಹಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಸದ್ಯ ಸಿಂಗ್ ರಾಜೀನಾಮೆಗೆ ಸಿಎಂ ಟ್ವೀಟ್ ಮೂಲಕವೇ ಉತ್ತರ ಹೇಳಿದ್ದಾರೆ. ಅದಕ್ಕೆ ಸಿಮೀತವಾಗಿ ನಾನು ಕೂಡ ಮಾತನಾಡುವೆ. ಕಾಂಗ್ರೆಸ್ ನಾಯಕರು ಎಲ್ಲವನ್ನು ಬಗೆಹರಿಸುತ್ತಾರೆ. ಮುಂದೆ ಏನೇನು ಬರುತ್ತೆ ಎಂದು ಕಾದು ನೋಡುವುದಾಗಿ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಅನುಭವದ ಮೂಲಕ ಕೆಲವು ವಿಚಾರಗಳನ್ನು ಹೇಳುತ್ತಾರೆ. ಸಮ್ಮಿಶ್ರ ಸರ್ಕಾರ ಹೇಗೆ ನಡಸಬೇಕು ಅನ್ನೋದು ಸಿಎಂ ಅವರಿಗಿದ್ದಷ್ಟು ಅನುಭವ ಬೇರೆ ಯಾರಿಗೂ ಇಲ್ಲ ಎಂದರು.