ಧಾರವಾಡ: ಕುಡಿದು ತಾಯಿಗೆ ಕಾಡುತ್ತಿದ್ದ ಮಗನಿಗೆ ಯುವಕರ ಗುಂಪೊಂದು ಹೊಡೆದು ಬುದ್ಧಿ ಕಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧಾರವಾಡದ ಜಯನಗರ ನಿವಾಸಿಯಾಗಿರುವ ಅಜೀಮ್ ಹೊಡೆತ ತಿಂದ ಮಗ. ಕಳೆದ ಮೂರು ತಿಂಗಳ ಹಿಂದೆ ಅಜೀಮ್ ಮದ್ಯ ಸೇವಿಸಿ ತಾಯಿ ಸಲೀಮಾ ಜೊತೆ ಜಗಳ ಮಾಡಿದ್ದನು. ಅಲ್ಲದೆ ಯಾವಾಗಲು ಕುಡಿದು ಮನೆಗೆ ಬಂದು ತಾಯಿಗೆ ಕಾಡುತ್ತಿದ್ದನು. ಮಗನ ಕಾಟದ ಬಗ್ಗೆ ಸಲೀಮಾ ಅವರು ಹ್ಯಾರಿಸ್ ಪಠಾಣ ಎಂಬ ಯುವಕನ ಬಳಿ ಹೇಳಿಕೊಂಡಿದ್ದರು. ಆದ್ದರಿಂದ ಹ್ಯಾರಿಸ್ ಆತನಿಗೆ ಬುದ್ಧಿ ಹೇಳಲು ತನ್ನ ಇಬ್ಬರು ಗೆಳೆಯರ ಜೊತೆಯಲ್ಲಿ ಅಜೀಮ್ ಮನೆಗೆ ಬಂದಿದ್ದನು. ಈ ವೇಳೆ ಅವನ ಮನೆಯಲ್ಲೇ, ತಾಯಿ ಎದುರಲ್ಲೇ ಅಜೀಮ್ಗೆ ಹೊಡೆದು ಕುಡಿತ ಬಿಡುವಂತೆ ಬುದ್ಧಿ ಹೇಳಿದ್ದರು.
ಈ ವೇಳೆ ಅಜೀಮ್ನ ಬಟ್ಟೆ ಬಿಚ್ಚಿ, ಕಟ್ಟಿಗೆ ಹಾಗೂ ಬೇಲ್ಟ್ ನಿಂದ ಆತನ ಮೇಲೆ ಹಲ್ಲೆ ನಡೆಸಿದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದರು. ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ 4 ನಿಮಿಷದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಈ ಬಗ್ಗೆ ಸ್ವತಃ ಅಜೀಮ್ ತಾಯಿ ಸಲೀಮಾ ಅವರು ಸ್ಪಷ್ಟನೆ ನೀಡಿದ್ದು, ನಾನೇ ಹೇಳಿ ನನ್ನ ಮಗನಿಗೆ ಬುದ್ದಿ ಕಲಿಸಿದ್ದೇನೆ. ಕುಡಿದ ಮತ್ತಿನ್ನಲ್ಲಿ ಮಗ ನನ್ನ ಬಳಿ ಜಗಳವಾಡುತ್ತಿದ್ದನು. ಇದೇ ವೇಳೆ ಹ್ಯಾರಿಸ್ ಬಂದಿದ್ದ, ನನ್ನ ಮೇಲೆ ಮಗ ಜಗಳ ಮಾಡಿದ್ದನ್ನು ನೋಡಿ ಹ್ಯಾರಿಸ್ ಆತನಿಗೆ ಹೊಡೆದು ಬುದ್ಧಿ ಕಲಿಸಿದ್ದಾನೆ ಎಂದು ಹೇಳಿದರು. ಇತ್ತ ಅಜೀಮ್ ಕೂಡಾ ಹ್ಯಾರಿಸ್ ನನಗೆ ಅಣ್ಣನಿದ್ದಂತೆ. ನನ್ನ ತಪ್ಪಿಗೆ ಬುದ್ಧಿ ಹೇಳಿದ್ದಾನೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾನೆ.