ಧಾರವಾಡ: ದೇಶಾದ್ಯಂತ ಅಪರಾಧಿಕ ಹಾಗೂ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದೆಹಲಿಯ ನಿರ್ಭಯಾ ಪ್ರಕರಣ ನಡೆದ ನಂತರ ಅತ್ಯಾಚಾರದ ಪ್ರಕರಣಗಳು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿವೆ. ಇದೆಲ್ಲದರ ಮಧ್ಯೆ ಧಾರವಾಡ ಜಿಲ್ಲೆಯ ವ್ಯಕ್ತಿಯೊಬ್ಬ ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿ ಗಮನ ಸೆಳೆಯುತ್ತಿದ್ದಾರೆ.
ನವಲಗುಂದ ಪಟ್ಟಣದ ಶೌಕತ ಎಂಬವರು ಹ್ಯಾಂಗ್ ಮ್ಯಾನ್ ಹುದ್ದೆಗಾಗಿ ಕಳೆದ 2013ರಲ್ಲಿ ಅರ್ಜಿ ಹಾಕಿದ್ದರು. ದೇಶದ್ರೋಹಿಗಳಿಗೆ ಗಲ್ಲು ಹಾಕಲು ನನಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಜ್ಯದಲ್ಲಿ ಹ್ಯಾಂಗ್ ಮ್ಯಾನ್ ಹುದ್ದೆಗೆ ಯಾರಿಲ್ಲ ಎಂದು ತಿಳಿದ ಶೌಕತ 2013ರಲ್ಲಿ ಕರ್ನಾಟಕ ಸರ್ಕಾರದ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಹಾಕಿದ್ದರು.
ದೇಶಪ್ರೇಮವನ್ನು ಮೈಗೂಡಿಸಿಕೊಂಡ ಶೌಕತ ಎಲ್ಲರೂ ಡಾಕ್ಟರ್, ಎಂಜಿನಿಯರ್, ಕ್ಲರ್ಕ್ ಹುದ್ದೆ ಬಯಸುತ್ತಾರೆ. ನನಗೆ ದೇಶ ಸೇವೆ ಮಾಡಬೇಕೆನ್ನುವ ಬಯಕೆಯಿಂದ ನಾನು ಹ್ಯಾಂಗ್ ಮ್ಯಾನ್ ಹುದ್ದೆಗೆ ಅರ್ಜಿ ಹಾಕಿದ್ದೆನೆ ಎಂದು ಹೇಳುತ್ತಾರೆ. ಹ್ಯಾಂಗ್ ಮಾಡುವ ವಿಷಯದ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದೆನೆ. ಈ ಕೆಲಸ ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆ ಎಂದು ಶೌಕತ್ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ನವಲಗುಂದದಲ್ಲಿ ಚಿಕ್ಕ ಹೊಟೇಲ್ ನಡೆಸುವ ಇವರು, ಸದ್ಯ ಹಲವು ಜೈಲುಗಳಲ್ಲಿ ಗಲ್ಲಿಗೆರಿಸುವ ಅಪರಾಧಿಗಳಿದ್ದು, ಅವರಿಗೆ ಗಲ್ಲು ಏರಿಸಲು ಯಾರೂ ಇಲ್ಲ, ನನಗೆ ಈ ಅವಕಾಶ ಸಿಕ್ಕರೆ ಮಾಡುತ್ತೇನೆ ಎಂದು ಹೇಳುತ್ತಾರೆ. ಈ ನೌಕರಿಗಾಗಿ ಇವರು ಬೆಂಗಳೂರು ಹಾಗೂ ದೆಹಲಿಗೆ ಕೂಡ ಹೋಗಿ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.