ಧಾರವಾಡ: ರಾಜ್ಯದಲ್ಲಿ ಮದ್ಯ ಮಾರಾಟ ಪುನರ್ ಆರಂಭ ವಿಚಾರವಾಗಿ ಬಿಜೆಪಿ ಶಾಸಕನಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಧಾರವಾಡ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನನ್ನ ವೈಯಕ್ತಿವಾಗಿ ಕೇಳಿದರೆ ಬಾರ್ ಓಪನ್ ಬೇಡ ಎಂದಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬಾರ್ ಗಳನ್ನು ಬಂದ್ ಮಾಡುವುದು ಒಳ್ಳೆಯದು. 20 ಸಾವಿರ ಕೋಟಿ ಲಿಕ್ಕರ್ ರೆವಿನ್ಯೂ ರಾಜ್ಯದಲ್ಲಿದೆ. ಸುಮಾರು 70-80 ಸಾವಿರ ಕೋಟಿ ಪ್ರತಿ ವರ್ಷ ಲಿಕ್ಕರ್ ಸೇಲ್ ಆಗುತ್ತೆ. ಅದರಲ್ಲಿ 10 ಸಾವಿರ ಕೋಟಿ ಮಾತ್ರ ಶ್ರೀಮಂತರು ಕುಡಿಯುತ್ತಾರೆ. ಉಳಿದಿದ್ದ ಎಲ್ಲವೂ ಬಡವರಿಂದ ಬಂದ ದುಡ್ಡು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಬಡವರ ಯೋಜನೆಗೆ ನಾವು ಹಣ ಕೊಡುತ್ತೇವೆ. ನಾವು ಖರ್ಚು ಮಾಡುವುದಕ್ಕಿಂತ ಬಡವರೇ ಮದ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಈಗ 45 ದಿನ ಲಾಕ್ಡೌನ್ನಿಂದ ಮದ್ಯ ಬಂದ್ ಆಗಿತ್ತು. ಇದರಿಂದ ಯಾರ ಮನೆಯಲ್ಲಿಯೂ ತೊಂದರೆ ಆಗಿಲ್ಲ. ಎಲ್ಲರೂ ರೇಷನ್ ತೆಗೆದುಕೊಂಡು ಊಟ ಮಾಡಿ ಆರಾಮಾಗಿ ಇದ್ದರು. ಈಗ ಮದ್ಯ ಆರಂಭ ಆದರೆ ಪುನಃ ಹೊಡೆದಾಟ-ಬಡಿದಾಟ ಶುರು ಆಗುತ್ತೆ. ಆದ್ದರಿಂದ ದೇಶಾದ್ಯಂತ ಮದ್ಯ ನಿಷೇಧ ಆಗಬೇಕು ಎಂದು ಬೆಲ್ಲದ ಹೇಳಿದರು.