ಧಾರವಾಡ: ನಟ ದಿ.ಪುನೀತ್ ರಾಜ್ಕುಮಾರ್ ಇದ್ದಾಗ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಕಷ್ಟ ಅಂತಾ ಬಂದವರಿಗೆ ನೆರವಾಗಿದ್ದಾರೆ. ಈಗ ಅವರು ನಮ್ಮೊಂದಿಗೆ ಇಲ್ಲದೇ ಇದ್ರೂ ಒಂದಷ್ಟು ಜನ ಅವರಿಂದಲೇ ಬದುಕು ಸುಂದರವಾಗಿಸಿಕೊಂಡಿದ್ದಾರೆ.
ನಮ್ಮ ಪ್ರೀತಿಯ ಅಪ್ಪು, ಅಭಿಮಾನಿಗಳ ಪರಮಾತ್ಮ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ 17 ದಿನಗಳೇ ಕಳೆದಿವೆ. ಆದರೆ ರಾಜಕುಮಾರನಿಲ್ಲದ ನೋವು ಅಭಿಮಾನಿಗಳ ಪ್ರತಿಕ್ಷಣವನ್ನೂ ಹಿಂಡಿಹಿಪ್ಪೆ ಮಾಡ್ತಿದೆ. ಅಪ್ಪು ಬದುಕಿದ್ದಾಗ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ರು. ಎಡಕೈಯಿಂದ ಕೊಟ್ಟಿದ್ದು ಬಲ ಕೈಗೆ ಗೊತ್ತಾಗದಂತೆ ನೂರಾರು ಜನರಿಗೆ ಆಸರೆಯಾಗಿದ್ರು. ಈಗ ಪುನೀತ್ ನಮ್ಮ ನಡುವೆ ಇಲ್ಲದೇ ಇದ್ದರೂ, ಅವರ ಹೆಸರಿನಲ್ಲಿ ಎಷ್ಟೋ ಜನ ತಮ್ಮ ಉಪಜೀವನ ಕಂಡುಕೊಂಡಿದ್ದಾರೆ. ಇದನ್ನೂ ಓದಿ: 13 ದಿನದಲ್ಲಿ 2 ಲಕ್ಷದ 26 ಸಾವಿರ ಮಂದಿಯಿಂದ ಅಪ್ಪು ಸಮಾಧಿ ದರ್ಶನ!
ಗದಗ ಜಿಲ್ಲೆಯ ನರಗುಂದ ಪಟ್ಟಣದ ದಾದಾಪಿರ ಹಾಗೂ ಇಬ್ರಾಹಿಂ ಎನ್ನುವ ವಿಶೇಷಚೇತನರಿಬ್ಬರು ಪುನೀತ್ ರಾಜ್ಕುಮಾರ್ ಅವರ ಹಾಡುಗಳನ್ನ ಹಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪುಟ್ಟರಾಜ ಗವಾಯಿ ಕ್ಷೇಮಾಭಿವೃದ್ಧಿ ಸಂಘದ ಹೆಸರಿನಲ್ಲಿ ಕೈಯಲ್ಲಿ ಒಂದು ಮೈಕ್ ಹಾಗೂ ಒಂದು ಸ್ಪೀಕರ್ ಇಟ್ಟುಕೊಂಡು ಹಾಡು ಹಾಡ್ತಿದ್ದಾರೆ.
ಪುನೀತ್ ರಾಜಕುಮಾರ್ ಅವರ ಹಾಡುಗಳು ಎಲ್ಲೇ ಕಿವಿಗೆ ಬಿದ್ದರೂ ಜನ ಥಟ್ ಅಂತಾ ಆ ಕಡೆ ಗಮನ ಕೊಡ್ತಾರೆ. ಅದೇ ರೀತಿ ಈ ಇಬ್ಬರು ಕಲಾವಿದರು ಬೀದಿಯಲ್ಲಿ ಹಾಡುವುದನ್ನು ನೋಡಲು ಎಷ್ಟೋ ಜನ ಬಂದು ನಿಲ್ತಾರೆ. ಅಲ್ಲದೇ ತಮ್ಮದೇ ಹಾಡಿನ ಟ್ರ್ಯಾಕ್ನಲ್ಲಿ ‘ಪುನೀತ್ ಅಣ್ಣ ಹುಟ್ಟಿ ಬಾ’ ಎಂಬ ಇವರ ಹಾಡು ಅದೆಷ್ಟೋ ಜನರ ಮನ ತಟ್ಟುತ್ತಿದೆ.
ಒಟ್ಟಿನಲ್ಲಿ ನೂರಾರು ಜನರಿಗೆ ಸಹಾಯ ಮಾಡ್ತಿದ್ದ ಅಪ್ಪು ನಮ್ಮ ನಡುವೆ ಇಲ್ಲದೇ ಇದ್ದರೂ ಹಲವು ಜೀವಗಳಿಗೆ ದುಡಿದು ತಿನ್ನಲು ದಾರಿ ದೀಪ ಆಗಿದ್ದಾರೆ. ಸದ್ಯ ಇವರ ಹಾಡುಗಳನ್ನೇ ಹಾಡುತ್ತಾ ಈ ಅಂಗವಿಕಲ ಕಲಾವಿದರು ತಮ್ಮ ಜೀವನ ನಡೆಸುತ್ತಿರುವುದು ನಿಜಕ್ಕೂ ಮನ ತಟ್ಟುತ್ತಿದೆ.