ಧಾರವಾಡ: ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ರೋಗದಿಂದ ಇಬ್ಬರು ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಗಿರಿಜವ್ವ ಗಂಟಿ(60) ಮಲ್ಲೇಶಪ್ಪ ಮಟಗಿ(70) ಮೃತ ದುರ್ದೈವಿಗಳು. ಕಳೆದ ಕೆಲ ದಿನಗಳ ಹಿಂದೆ ಮೃತರನ್ನು ಹುಚ್ಚು ಬೆಕ್ಕು ಕಚ್ಚಿ ಗಾಯಗೊಳಿಸಿತ್ತು. ಇದರಿಂದ ಇಬ್ಬರು ರೇಬಿಸ್ ರೋಗಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸದ್ಯ ಘಟನೆಯಿಂದ ನೀರಲಕಟ್ಟಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಹುಚ್ಚು ಬೆಕ್ಕು ಕಚ್ಚಿ ಗಾಯಗೊಳಿಸಿದ ಬಳಿಕ ಮೃತರು ಚುಚ್ಚುಮದ್ದು ತೆಗೆದುಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದರಿಂದ ರೋಗ ಉಲ್ಬಣಗೊಂಡು ಸಾವು ಸಂಭವಿಸಿದೆ. ಸದ್ಯ ಮೃತರ ಇತರೇ ಕುಟುಂಬ ಸದಸ್ಯರಿಗೆ ರೋಗ ಉಲ್ಬಣಿಸದಂತೆ ವೈದ್ಯಾಧಿಕಾರಿಗಳು ಚುಚ್ಚುಮದ್ದು ನೀಡಿದ್ದಾರೆ. ಅಲ್ಲದೇ ರೋಗಕ್ಕೆ ಒಳಗಾದ ಬೆಕ್ಕು ಗ್ರಾಮದ ಇತರೇ ಬೆಕ್ಕುಗಳಿಗೂ ಕಚ್ಚಿರುವ ಸಾಧ್ಯತೆ ಇರುವ ಕಾರಣ ಪಶುಸಂಗೋಪನಾ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.