ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಂಭ್ರಮಕ್ಕೆ ತೆರೆಬಿದ್ದಿದ್ದು, ಲಕ್ಷದೀಪೋತ್ಸವದ ಕೊನೆ ದಿನದ ಅಂಗವಾಗಿ ಮಂಜುನಾಥನ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆದಿದೆ.
ದೇವರ ಪೂಜೆ ಬಳಿಕ ಕೋಟಿ ಕೋಟಿ ದೀಪಗಳ ನಡುವೆ ಮಂಜುನಾಥನ ವೈಭವದ ಬೆಳ್ಳಿ ರಥೋತ್ಸವ ನಡೆದಿದ್ದು, ಮಕ್ಕಳು, ಹಿರಿಯರು, ವೃದ್ಧರೆನ್ನದೇ ಲಕ್ಷಾಂತರ ಜನರು ಈ ಪುಣ್ಯ ಕ್ಷಣವನ್ನು ಕಣ್ತುಂಬಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲೆಲ್ಲೂ ಫಲ ಪುಷ್ಪಗಳ ಶೃಂಗಾರ, ತಾಳ-ಮೇಳ ವಾದ್ಯಗಳ ಝೇಂಕಾರ, ಕಣ್ಮನ ಸೆಳೆಯುವ ಸಾಲು-ಸಾಲು ವಿದ್ಯುತ್ ದೀಪಗಳ ಅಲಂಕಾರ. ಬಗೆ ಬಗೆಯ ಬಣ್ಣದ ಕೊಡೆಗಳ ಚಿತ್ತಾರ ಇದೆಲ್ಲವನ್ನು ಲಕ್ಷಾಂತರ ಭಕ್ತರು ಮಂಜುನಾಥನ ದರ್ಶನ ಪಡೆದು ಪುನೀತರಾದರು.
ಲಕ್ಷದೀಪೋತ್ಸವದ ಕೊನೆ ದಿನದ ಅಂಗವಾಗಿ ಮಂಜುನಾಥನ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವರ ಬಲಿಪೂಜೆ ಬಳಿಕ ಬೆಳ್ಳಿಯ ರಥದಲ್ಲಿ ಮಂಜುನಾಥನ ಉತ್ಸವ ಮೂರ್ತಿಯನ್ನು ವಿರಾಜಮಾನಗೊಳಿಸಲಾಯಿತು. ಎಲ್ಲರೂ ಈ ಕ್ಷಣವನ್ನು ನೋಡಿ ಕಣ್ತುಂಬಿಸಿಕೊಂಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರ, ಕೋಟ್ಯಾಂತರ ಭಕ್ತರ ಪಾಲಿನ ಶಿವ ಸಾನಿಧ್ಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಭ್ರಮದ ದೀಪೋತ್ಸವಕ್ಕೆ ತೆರೆ ಬಿದ್ದಿದೆ. 5 ದಿನದ ಲಕ್ಷದೀಪೋತ್ಸವ ಸಂಭ್ರಮ ಮಂಜುನಾಥೇಶ್ವರನ ಬೆಳ್ಳಿ ರಥೋತ್ಸವದ ಮೂಲಕ ತೆರೆಕಂಡಿದ್ದು, ಜನರು ಮಂಜುನಾಥನ ದರ್ಶನ ಪಡೆದು ಕೃತಾರ್ಥರಾದರು.