ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala) ಆರೋಪಿ ಚಿನ್ನಯ್ಯನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರು ಮಾಡುವ ಸಮಯದಲ್ಲಿ ಕೋಟ್ ಕೆಲವು ಮಹತ್ವದ ವಿಚಾರಗಳನ್ನು ಉಲ್ಲೇಖ ಮಾಡಿದೆ.
18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಬಳಿಕ 3 ಸ್ಥಳಗಳಲ್ಲಿ ಬುರುಡೆ ಸಿಕ್ಕಿದೆ. ಆದರೆ ಅದನ್ನು ಹೂಳಲು ಹೇಳಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚಿಲ್ಲ. ತನಿಖೆ ಮಾಡುವಾಗ ಬುರುಡೆಯನ್ನು ಬೇರೆಯವರು ತಂದಿದ್ದಾರೆ ಎಂದು ಹೇಳಿದ್ದಾನೆ. ಹೀಗಾಗಿ ಈ ಬಗ್ಗೆಯೂ ತನಿಖೆ ನಡೆಯಬೇಕಿದೆ. ಈ ಹಿನ್ನೆಲೆ ಚಿನ್ನಯ್ಯನಿಗೆ 11 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ – ಚಿನ್ನಯ್ಯನಿಗೆ ಜಾಮೀನು ಮಂಜೂರು
ಈ ಮೊದಲು ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ 1 ಲಕ್ಷ ರೂ. ಬಾಂಡ್ ಸೇರಿ 11 ಷರತ್ತುಗಳನ್ನು ವಿಧಿಸಿ ನ.25ರಂದು ಜಾಮೀನು ಮಂಜೂರು ಮಾಡಿತ್ತು.
ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.ಇದನ್ನೂ ಓದಿ: ಧರ್ಮಸ್ಥಳ ತಲೆಬುರುಡೆ ಕೇಸ್; ಬೆಳ್ತಂಗಡಿ ಕೋರ್ಟ್ಗೆ 3,923 ಪುಟಗಳ ತನಿಖಾ ವರದಿ ಸಲ್ಲಿಕೆ
ಕೋರ್ಟ್ ಹೇಳಿದ್ದೇನು?
* ಎಸ್ಐಟಿ 18 ಸ್ಥಳಗಳಲ್ಲಿ ಹುಡುಕಾಟ ನಡೆಸಿದಾಗ 3 ಸ್ಥಳಗಳಲ್ಲಿ ಮಾನವ ಮೂಳೆಯ ಅವಶೇಷಗಳು ಪತ್ತೆಯಾದವು. ಐಒ ಆರೋಪಿಯನ್ನು ಮತ್ತೆ ವಿಚಾರಿಸಿದಾಗ ಬುರುಡೆಯನ್ನ ನಾನು ಹೊರ ತೆಗೆದಿಲ್ಲ, ಇತರ ವ್ಯಕ್ತಿಗಳ ಸೂಚನೆಯ ಮೇರೆಗೆ ದೂರು ಕೊಟ್ಟಿದ್ದೇನೆ ಅಂತಾ ಹೇಳಿದ್ದಾನೆ. ಈ ಬಗ್ಗೆ BNSS ಕಲಂ 183ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟಿದ್ದಾನೆ.
* ಇದಲ್ಲದೆ ಮೂಳೆ ಮತ್ತು ಮಣ್ಣನ್ನು ನಾನು ಸಂಗ್ರಹಿಸಿಲ್ಲ ಇತರರು ಕೊಟ್ಟಿದ್ದು, ಅವರ ಸೂಚನೆಯ ಮೇರೆಗೆ ಪೊಲೀಸರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದ್ದಾನೆ.
* ಆರೋಪಿಯ ವಿರುದ್ಧ ಯಾವುದೇ ಸಮಂಜಸವಾದ ಆಧಾರಗಳಿಲ್ಲ. ಎಸ್ಐಟಿ ಸರಿಯಾದ ತನಿಖೆ ಮಾಡದೇ ತಪ್ಪಾಗಿ ವಿವಿಧ ಅಪರಾಧಗಳನ್ನು ಹೊರೆಸಿದೆ. ಆರೋಪಿ ಎಲ್ಲಿಯೂ ತಾನು ಎಷ್ಟು ಶವಗಳನ್ನು ಹೂಳಿದ್ದೇನೆ ಎಂದು ನಿಖರವಾಗಿ ಹೇಳಿಲ್ಲ. ಹಾಗೂ ಸೂಕ್ತವಾದ ಸ್ಥಳದಲ್ಲಿ ಮೂಳೆಗಳು ಸಿಗುತ್ತವೆ ಎಂದು ಭರವಸೆ ನೀಡಿಲ್ಲ.
* ತಪ್ಪು ಸಾಕ್ಷ್ಯ ನೀಡಿದ ಕಾರಣಕ್ಕೆ ಅವನನ್ನು ಬಂಧಿಸುವುದು ಸರಿಯಲ್ಲ. ಆರೋಪಿಯ ಹೇಳಿಕೆಯಂತೆ ಅವನಿಗೆ ಸೂಚನೆ ನೀಡಿದವರ ಬಗ್ಗೆ SIT ಯಾವುದೇ ತನಿಖೆ ಮಾಡಿಲ್ಲ.
* SIT ದುರುದ್ದೇಶದಿಂದ ಜಾಮೀನು ನೀಡಬಾರದೆಂದು ವರದಿ ಸಲ್ಲಿಸಿದ್ದು, ಹೆಚ್ಚಿನ ಅಪರಾಧಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಇಲ್ಲ. ಆರೋಪಿ ಇನ್ನೂ ಬಂಧನದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ. ತನಿಖೆ ಬಹುತೇಕ ಪೂರ್ಣವಾಗಿದೆ.
* ಆರೋಪಿ ಎಷ್ಟು ಶವಗಳನ್ನು ಹೂಳಿದ್ದಾನೆ ಎಂದು ಗೊತ್ತಿಲ್ಲವೆಂದು ಮೊದಲೇ ಹೇಳಿದ್ದಾನೆ. ಶವ ಸುಟ್ಟ ಸ್ಥಳ ನದಿಯ ಪಕ್ಕದಲ್ಲಿದ್ದು, ಮಳೆ ಮತ್ತು ನೀರಿನಿಂದ ಮರಗಳು ಬೆಳೆದಿರಬಹುದು, ಹೀಗಾಗಿ ಮೂಳೆಗಳು ಹರಿದು ಹೋಗಿರಬಹುದು. ಆರೋಪಿ SIT ಜೊತೆಗೆ ಹಲವು ದಿನ ಮೂಳೆ ಹುಡುಕುವ ಕಾರ್ಯದಲ್ಲಿ ಸಹಕರಿಸಿದ್ದಾನೆ.
* 3 ಸ್ಥಳಗಳಲ್ಲಿ ಮೂಳೆಗಳು ಸಿಕ್ಕಾಗ ಎಸ್ಐಟಿ ಆರೋಪಿಯನ್ನು ಸಂಶಯದ ಆಧಾರದ ಮೇಲೆ ಆರೋಪಿಯನ್ನಾಗಿಸಿದೆ. ಅಪರಾಧ ಮರಣದಂಡನೆಗೆ ಒಳಪಟ್ಟಿಲ್ಲ
* ದಾಖಲೆಗಳ ಪ್ರಕಾರ ದೂರುದಾರನೇ ಆರೋಪಿ ಆಗಿದ್ದಾನೆ. ಮೊದಲನೆ ಹಂತದಲ್ಲಿ ಆರೋಪಿಸಿರುವ ಅಪರಾಧ ಗಂಭೀರ ಮರಣದಂಡನೆ ಹೊಂದಿಲ್ಲ.
* ಆರೋಪಿ 3 ತಿಂಗಳಿನಿಂದ ಬಂಧನದಲ್ಲಿದ್ದಾನೆ. ಆರಂಭದಲ್ಲಿ 13 ದಿನ ಮಾತ್ರ ಪೊಲೀಸ್ ಕಸ್ಟಡಿಯಲ್ಲಿದ್ದ. ಮುಂದಿನ ಕಸ್ಟಡಿ ಬೇಡವೆಂದು ಪೊಲೀಸರು ಯಾವುದೇ ಕಾರಣ ಸಲ್ಲಿಸಿಲ್ಲ.
* ಆರೋಪಿ ಶಾಶ್ವತ ವಿಳಾಸದಲ್ಲೇ ಇದ್ದಾನೆ. ಅವನ ಹಾಜರಾತಿಯನ್ನು ಕಲ್ಪಿಸಿಕೊಳ್ಳಬಹುದು. ಸಾಕ್ಷಿದಾರರಿಗೆ ಧಮ್ಕಿ ಕೊಡಲಿದ್ದಾನೆ ಎಂಬ ಆಧಾರವಿಲ್ಲ. “ಜೈಲು ಅಪವಾದ, ಜಾಮೀನು ನಿಯಮ” ಎಂಬ ತತ್ತ್ವ ಅನ್ವಯಿಸುತ್ತದೆ.
* ಜಾಮೀನು ನೀಡದಿದ್ದರೆ ಮುಂಚಿತ ಶಿಕ್ಷೆಯಂತಾಗುತ್ತದೆ. ಸರ್ಕಾರದ ಆತಂಕಗಳನ್ನು ಷರತ್ತುಗಳ ಮೂಲಕ ತಡೆಗಟ್ಟಬಹುದು. ಹೀಗಾಗಿ ಜಾಮೀನು ನೀಡುವುದು ಸಮಂಜಸ.

