-2 ಕೋಟಿ ರೂ. ಕಾಣಿಕೆ ಹಣ ಸಂಗ್ರಹ ನಿರೀಕ್ಷೆ
-ವಿಶೇಷ ದರ್ಶನ – ಪ್ರಸಾದ, ಲಾಡು ಮಾರಾಟ 63 ಲಕ್ಷ ರೂ. ಸಂಗ್ರಹ
ಹಾಸನ: ಅ.28 ರಿಂದ 10 ದಿನಗಳ ಕಾಲ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ವೇಳೆ ದೇವರಿಗೆ ಬಗೆ ಬಗೆಯ ಪತ್ರಗಳನ್ನು ಬರೆದು ಕಷ್ಟ, ತಮ್ಮ ಬಯಕೆ ಈಡೇರಲಿ ಎಂದು ಹರಕೆ ಸಲ್ಲಿಸುವ ಮೂಲಕ ಭಕ್ತರು ಪರಾಕಾಷ್ಠೆ ಮೆರೆದಿದ್ದಾರೆ.
ನನ್ನ ಪತಿ ಕುಡಿತದ ಚಟ ಬಿಡಲಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ, ಶೀಘ್ರ ನ್ಯಾಯಾಲಯ ವ್ಯಾಜ್ಯ ಬಗೆಹರಿಯಲಿ. ಹೀಗೆ ಹಲವಾರು ಬಗೆಯ ಕೋರಿಕೆಯ ಪತ್ರಗಳು ಹಾಸನಾಂಬ ಹುಂಡಿಯಲ್ಲಿ ಸಂಗ್ರಹವಾಗಿವೆ. ಇಂದು ಹುಂಡಿ ಎಣಿಕೆಯ ಕಾರ್ಯ ನಡೆಯುತ್ತಿದ್ದು, ಹುಂಡಿಯಲ್ಲಿ ಕಾಣಿಕೆಯೊಂದಿಗೆ ಹಲವಾರು ಕೋರಿಕೆಯ ಪತ್ರಗಳು ಲಭ್ಯವಾಗಿವೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ
ಹಾಸನ ನಗರಕ್ಕೆ ಮೂಲಭೂತ ಸೌಲಭ್ಯ ದೊರೆತು ಇಡೀ ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಮಾಡುವಂತೆ ಕೆಲವರು ಪತ್ರ ಬರೆದಿದ್ದರೆ, ಇನ್ನು ಕೆಲ ದಂಪತಿಗಳು ಗಂಡು ಮಗು ಕರುಣಿಸಲಿ. ಆರೋಗ್ಯವಾಗಿರಲಿ. ಹೊಳೆನರಸೀಪುರ ಶಾಸಕ ಹೆಚ್ಡಿ.ರೇವಣ್ಣರನ್ನು ಬದಲಾಯಿಸು ತಾಯೇ, ನಮ್ಮ ಪ್ರೇಮ ಸುಖಾಂತ್ಯವಾಗಲಿ ಎಂದು ಹುಡುಗಿ ರಕ್ತದಲ್ಲಿ ಬರೆದಿರುವ ಪತ್ರ ಸೇರಿದಂತೆ ಹಲವು ಬಗೆಯ ವಿಚಿತ್ರ ಬಗೆಯ ಕೋರಿಕೆಯ ಪತ್ರಗಳನ್ನು ಹುಂಡಿಗೆ ಹಾಕಿದ್ದಾರೆ.
ಎರಡು ಕೋಟಿ ಕಾಣಿಕೆ ಹಣ ಸಂಗ್ರಹ ನಿರೀಕ್ಷೆ:
10 ರೂ., 500 ರೂ., 2,000 ರೂ. ನೋಟಿನ ಕಂತೆಗಳನ್ನು ಕಾಣಿಕೆ ರೂಪದಲ್ಲಿ ಹಾಕಲಾಗಿದೆ. ಈ ಬಾರಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದಿದ್ದು, ಸುಮಾರು 2 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗುವ ಸಾಧ್ಯತೆ ಇದೆ. ಸಿಸಿ ಕ್ಯಾಮೆರಾ ಹಾಗೂ ಭದ್ರತೆಯೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಸಂಜೆ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಭ್ರಷ್ಟ ರಾಜಕಾರಣಿಗಳು ಸಾಯಬೇಕಿತ್ತು – ಹಾಸನಾಂಬೆಗೆ ಪತ್ರ ಬರೆದ ಅಪ್ಪು ಅಭಿಮಾನಿ
ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ಕಂದಾಯ ಇಲಾಖೆಯ 85 ಸಿಬ್ಬಂದಿ ಹಾಗೂ ಸ್ವಯಂಸೇವಕರು ಹಾಸನಾಂಬೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ 10 ದಿನಗಳಲ್ಲಿ 4 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್ಕುಮಾರ್
300 ಮತ್ತು 1000 ಟಿಕೆಟ್ ಮಾರಾಟ, 63 ಲಕ್ಷ ರೂ. ಸಂಗ್ರಹ. 1000 ರೂ ಟಿಕೆಟ್ ಮಾರಾಟದಿಂದ 26,36,002 ರೂ. 300 ರೂ. ಟಿಕೆಟ್ ಮಾರಾಟದಿಂದ 29,73,150 ರೂ. ಹಾಗೂ ಲಾಡು ಪ್ರಸಾದ ಮಾರಾಟದಿಂದ 73,9150 ರೂ. ಸೇರಿ ಸುಮಾರು ಒಟ್ಟು 63,48,302 ರೂ. ಸಂಗ್ರಹವಾಗಿದೆ ಎಂದು ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಮಾಹಿತಿ ನೀಡಿದ್ದಾರೆ.