ಬೆಳಗಾವಿ: ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯದ ವೇಳೆ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿವೆ.
ಪತ್ರವನ್ನು ಹುಂಡಿಗೆ ಹಾಕಿದ್ರೆ ದೇವಿ ಕೋರಿಕೆ ಈಡೇರಿಸುತ್ತಾಳೆಂಬ ನಂಬಿಕೆ ಜನರಿಗಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಬೇಡಿಕೆಯನ್ನು ಪತ್ರದ ಮೂಲಕ ದೇವಿ ಮುಂದಿಟ್ಟಿದ್ದಾರೆ. ಭಕ್ತರ ಈ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!
ಏಳು ಕೊಳ್ಳದ ಯಲ್ಲಮ್ಮದೇವಿಗೆ ಹಣದ ಅಮಿಷವೂಡ್ಡಿದ್ದ ಭಕ್ತನೊಬ್ಬ ನನಗೆ ಮಾಟ ಮಂತ್ರ ಮಾಡಿಸಿದವರಿಗೆ ಶಿಕ್ಷೆ ನೀಡಿದರೆ 50,001 ರೂ. ಕಾಣಿಕೆ ನೀಡುವುದಾಗಿ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. ನನ್ನ ವ್ಯವಹಾರಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ. ಇದರಿಂದ ಸಾಲಗಾರರ ಕಾಟ ಶುರುವಾಗಿದೆ ಎಂದಿದ್ದಾನೆ. ಆನ್ ಲೈನ್ ಗೇಮ್ ನಲ್ಲಿ ಕಳೆದುಕೊಂಡ ಹಣ ಮರಳಿ ಬರುವಂತೆ ಮಾಡು ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆನ್ ಲೈನ್ ಗೇಮ್ ಆಡಲು ಮನಸ್ಸು ಬರದಂತೆ ಮಾಡು ಎಂದು ಮನವಿ ಮಾಡಿಕೊಳ್ಳಲಾಗಿದೆ. ಮರಾಠಿ ಭಾಷೆಯಲ್ಲೂ ಭಕ್ತರು ದೇವಿ ಹುಂಡಿಗೆ ಪತ್ರ ಹಾಕಿ ಬೇಡಿಕೆ ಇಟ್ಟಿದ್ದಾರೆ.
40 ದಿನಗಳ ಕಾಲ ಸಂಗ್ರಹವಿದ್ದ ಹುಂಡಿ ಕಾರ್ಯ ದೇವಸ್ಥಾನ ಆವರಣದಲ್ಲಿ ಎರಡು ದಿನ ನಡೆದಿತ್ತು. ಹುಂಡಿಯಲ್ಲಿ 40 ದಿನದಲ್ಲಿ 1.13ಕೋಟಿ ರೂ. ನಗದು ಸಂಗ್ರಹವಾಗಿದೆ. 22ಲಕ್ಷ ರೂ. ಮೌಲ್ಯದ ಬಂಗಾರ, 3.86ಲಕ್ಷ ರೂ ಮೌಲ್ಯದ ಬೆಳ್ಳಿ ಪತ್ತೆಯಾಗಿದೆ.