ಬೆಂಗಳೂರು/ಮಡಿಕೇರಿ: ಇಂದು ನಾಡಿನೆಲ್ಲೆಡೆ ಏಕದಂತ, ವಿಜ್ಞವಿನಾಶಕ, ಪಾರ್ವತಿ ಪುತ್ರ ಗಣೇಶನ ಹಬ್ಬವನ್ನ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಪುರಾತನ ಕಾಲದ ಉದ್ಭವ ಗಣೇಶನ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಇಂದು ಬೆಳಗ್ಗೆನಿಂದಲೇ ಆರಂಭವಾಗಿದೆ. ಮಾನವ ನಿರ್ಮಿತವಲ್ಲದ ಈ ಗಣೇಶ ಕಲ್ಲು ಬಂಡೆಯಲ್ಲಿ ಮೂಡಿ ಬಂದಿದ್ದು ಇಲ್ಲಿನ ಜನರಲ್ಲಿ ಅಚ್ಚರಿ ಮೂಡಿಸಿದೆ.
ಇನ್ನೂ ವರ್ಷದಿಂದ ವರ್ಷಕ್ಕೆ ಕಲ್ಲಿನ ಬಂಡೆಯಲ್ಲಿ ಮೂಡಿ ಬಂದಿರುವ ಗಣೇಶ ಸಾಕಷ್ಟು ಬದಲಾವಣೆಯಾಗಿ ಗಣೇಶನ ಆಕೃತಿಯಾಗಿ ಬೆಳೆಯುತ್ತಿದೆ. ಹೀಗಾಗಿ ಪ್ರತಿನಿತ್ಯ ಈ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಈ ಗಣೇಶ ತನ್ನ ಭಕ್ತರಿಗೆ ಕೇಳಿದ್ದನ್ನೆಲ್ಲ ಕರುಣಿಸುತ್ತಾನೆಂಬ ನಂಬಿಕೆಯಿದೆ.
ಅದರಂತೆ ಕಾಫಿನಾಡು ಕೊಡಗಿನಲ್ಲಿಯೂ ಕೂಡ ಜನ ಶ್ರದ್ಧಾಭಕ್ತಿಯಿಂದ ಹಬ್ಬದ ಆಚಾರಣೆಯಲ್ಲಿ ತೊಡಗಿದ್ದಾರೆ. ಮಡಿಕೇರಿಯ ಐತಿಹಾಸ ಪ್ರಸಿದ್ಧ ಕೋಟೆ ಗಣಪತಿ ದೇವಾಲಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸುತ್ತಿರೋ ಭಕ್ತರು ಸರತಿ ಸಾಲಿನಲ್ಲಿ ನಿಂತು ಗೌರಿಪುತ್ರ ವಿನಾಯಕ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಕೋಟೆಗಣಪನಿಗೆ ತೆಂಗಿನಕಾಯಿ ಒಡೆಯೋದು ಇಲ್ಲಿನ ವಿಶೇಷವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಬೆಳಗ್ಗೆಯಿಂದಲೂ ತೆಂಗಿನಕಾಯಿಗಳನ್ನು ಒಡೆಯುತ್ತಾ ಭಕ್ತರು ವಿನಾಯಕನ ಜಪ ಮಾಡುತ್ತಿದ್ದಾರೆ.