ಹಾಸನ: ಸಾಮಾನ್ಯವಾಗಿ ಹಾವು ಮೃತಪಟ್ಟರೆ ಎಲ್ಲೋ ಕೊಳೆತು ಹೊಗುತ್ತೆ ಅದರ ಕುರಿತು ಮಾನವ ಗಮನವನ್ನೂ ಹರಿಸುವುದಿಲ್ಲ. ಕೊಳೆತ ವಾಸನೆ ಎಂದು ಮೂಗು ಮುಚ್ಚಿಕೊಂಡು ಹೋಗಿ ಬಿಡುತ್ತಾರೆ. ಆದರೆ ಇಲ್ಲೊಂದು ನಾಗರ ಹಾವು ಮೃತಪಟ್ಟು ಅದಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ನಂತರ ಆರಾಧನೆ ಕೂಡ ಮಾಡಲಾಗಿದೆ.
ಹಾಸನ ಜಿಲ್ಲೆಯ ಹೊಳೇನರಸೀಪುರದ ರಿವರ್ ಬ್ಯಾಂಕ್ ರಸ್ತೆಯಲ್ಲಿ ಪುರಾತನ ಆಶ್ರಮವಿದೆ. ಮಡಿವಾಳೇಶ್ವರ ದೇಶೀ ಕೇಂದ್ರ ಶಿವಾಚಾರ್ಯ ಆಶ್ರಮವಿದು. ಇಲ್ಲಿ ಈಶ್ವರನ ಲಿಂಗವಿರುವ ಗದ್ದುಗೆ ಇದ್ದು, ವಿಶೇಷ ಏನು ಅಂದರೆ ಕಳೆದ 15 ವರ್ಷಗಳಿಂದ ಅಲ್ಲಿಯೇ ವಾಸವಿದ್ದು ಭಕ್ತರಿಗೂ ದರ್ಶನ ನೀಡುತ್ತಿದ್ದ ನಾಗರ ಹಾವು ಎಲ್ಲರ ಪ್ರೀತಿ ಮತ್ತು ಶೃದ್ಧೆಗೆ ಕಾರಣವಾಗಿತ್ತು.
ದೇವಸ್ಥಾನಕ್ಕೆ ಸಾಕಷ್ಟು ಮಂದಿ ಭಕ್ತರು, ಮಕ್ಕಳು, ಸಾರ್ವಜನಿಕರು ಬಂದರೂ ಸಹ ಯಾರಿಗೂ ಅದು ತೊಂದರೆ ನೀಡುತ್ತಿರಲಿಲ್ಲ. ಆಶ್ರಮದ ಒಳಭಾಗದಲ್ಲಿರುವ ಗದ್ದುಗೆ ಮೇಲೆ ಕೆಲವೊಮ್ಮೆ ಶಿವಲಿಂಗದ ಮೇಲೆ ಕೂತು ಹೆಡೆ ಬಿಚ್ಚಿ ದರ್ಶನ ನೀಡುತಿತ್ತು.
ಈ ನಾಗನನ್ನು ದೇವರ ಹಾವು ಎಂದೇ ಭಕ್ತರು ನಂಬಿದ್ದರು. ಈ ನಾಗರಹಾವು ಕಳೆದ ಗುರುವಾರ ಮೃತಪಟ್ಟಿತ್ತು. ಹೀಗಾಗಿ ಭಕ್ತರು ಮೃತಪಟ್ಟ ದೇವರ ಹಾವನ್ನು ಅದೇ ಆಶ್ರಮದ ಬಳಿ ಇರುವ ಅರಳೀಕಟ್ಟೆ ಮೇಲೆಯೇ ಅಂತ್ಯ ಸಂಸ್ಕಾರ ಮಾಡಿ ಭಕ್ತಿಯನ್ನು ಮೆರೆದಿದ್ದಾರೆ.