ತಿರುಪತಿ: ದೇಶದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ತಿರುಪತಿ ತಿರುಮಲ ದೇವಾಲಯ ಅಷ್ಟಬಂಧನ ಧಾರ್ಮಿಕ ಕಾರ್ಯಕ್ರಮದಿಂದ 7 ದಿನಗಳ ಕಾಲ ಭಕ್ತರಿಗೆ ದರ್ಶನ ಲಭ್ಯವಿಲ್ಲ ಎಂದು ಟಿಟಿಡಿ ಸಮಿತಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಸಮಿತಿಯ ಮುಖ್ಯಸ್ಥ ಪುಟ್ಟ ಸುಧಾಕರ್ ಯಾದವ್, ಆಗಸ್ಟ್ 9 ರಿಂದ 17 ರವೆಗೂ ಅಷ್ಟ ಬಂಧನ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವುದರಿಂದ ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಟಿಡಿ ಸಮಿತಿ ಶನಿವಾರ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಆಗಸ್ಟ್ 11 ರ ಮುಂಜಾನೆ 6 ರಿಂದ ದೇವರ ದರ್ಶನ ಕಾರ್ಯ ಸ್ಥಗಿತಗೊಳ್ಳಲಿದೆ. ಆದರೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಆಗಸ್ಟ್ 11 ರಂದು ದೇವರಿಗೆ ವಿಶೇಷ ಪೂಜೆ ಆರಂಭ ಮಾಡಲಾಗುತ್ತದೆ. ಈ ಪ್ರಕ್ರಿಯೇ 9 ತಿಂಗಳು ಕಾಲ ಮುಂದುವರೆಯಲಿದ್ದು, ಈ ಅವಧಿಯಲ್ಲಿ ದೇವರ ದರ್ಶನ ಭಾಗ್ಯ ಲಭ್ಯವಾಗುವುದಿಲ್ಲ. ಸದ್ಯ ಟಿಟಿಡಿ ಸಮಿತಿ ನಿರ್ಧಾರಕ್ಕೆ ಭಕ್ತ ಸಮೂಹದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಏನಿದು ಬಾಲಾಲಯ ಮಹಾಸಂಪ್ರೋಕ್ಷಣೆ? ತಿಮ್ಮಪ್ಪನ ಮೂಲವಿರಾಟ್ ಮತ್ತು ಇತರೆ ದೇವರ ವಿಗ್ರಹಗಳ ಶಕ್ತಿಯನ್ನು ಬಿಂಬದಿಂದ ಕುಂಭದೊಳಕ್ಕೆ ಆವಾಹನೆ ಮಾಡುವ ಪ್ರಕ್ರಿಯೆಯಾಗಿದೆ. ಧಾರ್ಮಿಕ ಆಚಾರಣೆಯನ್ನು 12 ವರ್ಷಗಳಿಗೆ ಒಮ್ಮೆ ಮಾತ್ರ ಮಾಡಲಾಗುತ್ತದೆ.
ಅಷ್ಟಬಂಧನ: 8 ರೀತಿಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣ. ಈ ಚೂರ್ಣದ ಆಯಸ್ಸು 12 ವರ್ಷಗಳ ಕಾಲ ಇರುತ್ತದೆ. ಈ ಅಷ್ಟ ಬಂಧನವನ್ನು ತಿಮ್ಮಪ್ಪನ ಪಾದದಲ್ಲಿ ಇರಿಸುತ್ತಾರೆ. ವಿಶೇಷವಾಗಿ ಮಹಾಸಂಪ್ರೋಕ್ಷಣೆ ವೇಳೆ ದೇಗುಲದ ಸಿಬ್ಬಂದಿಗೂ ರಾಮುಲವಾರಿ ಮೇಡ ದಾಟಲು ಅವಕಾಶ ಇರಲ್ಲ.