ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದ ಭಕ್ತರನ್ನು ರಕ್ಷಣೆ ಮಾಡಲಾಗಿದೆ.
ಕಲ್ಲತ್ತಗಿರಿ ಜಲಪಾತದಲ್ಲಿ ಭಾರೀ ನೀರು ಹರಿದ ಪರಿಣಾಮ ವೀರಭದ್ರೇಶ್ವರ ದೇವಾಲಯದಲ್ಲಿ ಭಕ್ತರು ಸಿಲುಕಿದ್ದರು. ದೇವಾಲಯದಿಂದ ಈ ಕಡೆ ಬರಲಾಗದೆ ಭಕ್ತಾದಿಗಳು ಪರದಾಡಿದ್ದಾರೆ. ಕೂಡಲೇ ವಿಷಯ ತಿಳಿದು ಅಗ್ನಿಶಾಮಕ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಹಗ್ಗ ಕಟ್ಟಿ ಭಕ್ತಾದಿಗಳನ್ನ ರಕ್ಷಣೆ ಮಾಡಿದ್ದಾರೆ. ಒಬೊಬ್ಬರನ್ನೇ ಸಿಬ್ಬಂದಿ ರಕ್ಷಣೆ ಮಾಡಿದ್ದು, ಭಕ್ತರು ಭಯದಿಂದಲೇ ದಡ ಸೇರಿದ್ದಾರೆ.
ದೇವಸ್ಥಾನದ ಮುಂಭಾಗ ಸಾಕಷ್ಟು ಜನ ನಿಂತಿದ್ದರು. ಈ ವೇಳೆ ಜಲಪತಾದಲ್ಲಿ ಹೆಚ್ಚಿನ ನೀರು ಹರಿಯಲಾರಂಭಿಸಿದೆ. ನೀರು ಹರಿಯುತ್ತಿದ್ದಂತೆಯೇ ಕೆಲವರು ಹೊರಬಂದಿದ್ದು, ನೀರಿನಲ್ಲಿ ಸಿಲುಕಿಕೊಂಡಿದ್ದರು. ಮತ್ತೆ ಕೆಲವರು ಈ ಕಡೆ ಬರಲಾರದೆ ದೇವಸ್ಥಾನಲ್ಲೇ ನಿಂತಿದ್ದರು.
ಕೆಮ್ಮಣ್ಣು ಗುಂಡಿ ಭಾಗದಲ್ಲಿ ಹರಿಯುತ್ತಿರುವ ಮಳೆಯಿಂದಾಗಿ ಜಲಪಾತದಲ್ಲಿ ಕಳೆದ 2 ದಿನಗಳಿಂದ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿತ್ತು. ಆದರೆ ಭಕ್ತರು ದೇವಸ್ಥಾನಕ್ಕೆ ತೆರಳಲು ಯಾವುದೇ ರೀತಿಯ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ನಿನ್ನೆ ರಾತ್ರಿಯಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದರಿಂದ ಇಂದು ಬೆಳಗ್ಗೆ ನೀರು ಹರಿಯುವ ಪ್ರಮಾಣ ಹೆಚ್ಚಾಗುತ್ತಿತ್ತು.