ಚಿಕ್ಕಮಗಳೂರು: ದೇವರಲ್ಲಿ ಕೆಲವು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಬೇಡಿಕೆಗಳ ಪತ್ರ ಬರೆದು ಹುಂಡಿಯಲ್ಲಿ ಹಾಕುತ್ತಾರೆ. ಆದರೆ ಇಲ್ಲೊಬ್ಬ ದೇವರನ್ನು ಸ್ನೇಹಿತನಂತೆ ಸಲುಗೆಯಿಂದ ಪತ್ರವೊಂದನ್ನು ಬರೆದಿದ್ದಾನೆ.
ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಾಫಿನಾಡಿನ ಕಳಸಾದ ಕಲಸೇಶ್ವರ ಸ್ವಾಮಿಗೆ ಭಕ್ತನೊಬ್ಬ ಇಂಗ್ಲೀಷ್ ಮಿಶ್ರಿತ ಪತ್ರ ಬರೆದು ನಿವೇದಿಸಿಕೊಂಡಿದ್ದಾನೆ. ಪತ್ರದಲ್ಲಿ “ನನ್ನ ದೇವರಾದ ಶ್ರೀ ಕಲಶೇಶ್ವರ ಸ್ವಾಮಿಗಳಿಗೆ ಎಂದು ಪ್ರಾರಂಭಿಸಿದ್ದು, ಪ್ರತೀ ಸಲ ಬಂದಾಗಲು ಪತ್ರ ಬರೆಯುತ್ತೇನೆ. ಆದರೆ ಆ ಪತ್ರ ಏನಾಗುತ್ತದೋ ಗೊತ್ತಿಲ್ಲ. ಈ ಸಲ ನಾನು ಆದಷ್ಟು ಕೆಲಸ ಮುಗಿಸಿದ್ದೀನಿ. ಆದರೆ ಮುಖ್ಯವಾದದ್ದನ್ನೇ ಮಾಡಿಲ್ಲ. ನನಗೆ ಖಂಡಿತ ನಂಬಿಕೆ ಇದೆ. ನಾನು ಒಂದಲ್ಲ ಒಂದು ದಿನ ನೀವು ಅಂದುಕೊಂಡ ಹಾಗೆ ಆಗುತ್ತೇನೆ ಅಂತ ಬರೆದಿದ್ದಾನೆ.
ಅಷ್ಟೇ ಅಲ್ಲದೇ ಕಳಸಾದ ಜನ ತುಂಬಾ ಒಳ್ಳೆಯವರು. ನಾನು ಕೆಟ್ಟವನು ಅದಕ್ಕೆ ನನಗೆ ಹೀಗಾಗಿದೆ. ಪತ್ರದಲ್ಲಿ ಈ ಸಲ ಕೆಟ್ಟ ಶಬ್ದಗಳನ್ನ ಕಡಿಮೆ ಮಾಡಿದ್ದೇನೆ. ಮುಂದಿನ ಸಲ ಇನ್ನೂ ಬದಲಾವಣೆ ಜೊತೆ ಬರುತ್ತೇನೆ. ದೇವರೆ ನಾನು ಹಂತಹಂತವಾಗಿ ಒಳ್ಳೆಯವನಾಗಲು ಅವಕಾಶ ಕೊಡಿ. ನಾನು ನಿಮಗೆ ಮೋಸ ಮಾಡಿರಬಹುದು. ಆದರೆ ನಾನು ನಿಮಗೆ ಕೊಡುವ ಗೌರವವನ್ನು ಬೇರೆಯಾರಿಗೂ ಕೊಡುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ.
ಪ್ರಾಮಿಸ್ ದೇವರೆ ಮುಂದಿನ ಸಲ ಬರುವಾಗ ಇನ್ನು ಒಳ್ಳೆಯವನಾಗಿರುತ್ತೀನಿ. ಯಾರು ಏನೇ ಮಾಡಿದರೂ, ನೀವು ನನ್ನ ಜೊತೆ ಇರಿ. ನನ್ನ ಮನಸ್ಸೇ ನನ್ನ ದೊಡ್ಡ ವೈರಿ. ಅದನ್ನು ನಿಯಂತ್ರಿಸಲು ನನಗೆ ಸಹಾಯ ಮಾಡಿ. ನನಗೆ ನಿಮ್ಮನ್ನು ಬಿಟ್ಟು ಯಾರು ಇಲ್ಲ ಇಲ್ಲಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ.
ಪತ್ರದ ಸಾರಾಂಶ ನೋಡಿದರೆ ಆತನಿಗೆ ಮಾಡಿದ ತಪ್ಪಿನ ಅರಿವಾಗಿ ಪಾಪ ಪ್ರಜ್ಞೆ ಕಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv