– ಸಿಎಂ ಕುಮಾರಸ್ವಾಮಿ ರಾಜಕಾರಣಿಯೇ ಅಲ್ಲ
ಶಿವಮೊಗ್ಗ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಮೈತ್ರಿ ನಾಯಕರ ವಿರುದ್ಧ ಬಿಜೆಪಿ ಶಾಸಕ ಆಯನೂರು ಮಂಜುನಾಥ್ ಟೀಕಾಪ್ರಹಾರ ನಡೆಸಿದ್ದಾರೆ.
ಐಟಿ ರೇಡ್ ಬಗ್ಗೆ ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಕುಮಾರಸ್ವಾಮಿ ರಾಜಕಾರಣಿಯೇ ಅಲ್ಲ. ಆತ ಜನರ ನಡುವೆ ಬೆಳೆದವನಲ್ಲ. ನೇರವಾಗಿ ತಂದೆ ಹೆಸರಿನಲ್ಲಿ ಬಂದು ರಾಜಕಾರಣ ಆರಂಭಿಸಿದ ಅವರಿಗೆ ಏನು ಗೊತ್ತಿದೆ? ಭ್ರಷ್ಟ ಎಂಜಿನಿಯರ್ಗಳು, ಕಾಂಟ್ರಾಕ್ಟ್ದಾರರ ಮೇಲೆ ಐಟಿ ರೇಡ್ ಆಗಿದೆ. ಇದಕ್ಕೆ ದೇಶದಲ್ಲಿ ಮೊದಲ ಬಾರಿಗೆ ಸಿಎಂ ಬೀದಿಗೆ ಬಂದು ಇಂಥವರ ಪರ ಪ್ರತಿಭಟನೆ ಮಾಡಿದ್ದಾರೆ ಎಂದರು.
ಬಿಜೆಪಿ ನಾಯಕರ ಮನೆಯಲ್ಲಿ ಹಣ ಇದ್ದರೆ ಮಾಹಿತಿ ನೀಡಲಿ. ಅದರ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ತಾರೆ. ಈ ರಾಜ್ಯದಲ್ಲಿ ಸತ್ಯಹರಿಶ್ಚಂದ್ರರು ಇದ್ದರೆ ಅದು ದೇವೇಗೌಡರ ಕುಟುಂಬ ಮಾತ್ರ ಎಂದು ವ್ಯಂಗ್ಯವಾಡಿದರು.
ಕಳ್ಳರಿಗೆ ಯಾರೂ ಭಿಕ್ಷೆ ಕೊಡಲ್ಲ. ಕಳ್ಳರಿಗೆ ಯಾರೂ ದಾನ ಕೊಡಲ್ಲ. ನಿಷ್ಠಾವಂತರಿಗೆ, ಸರಿಯಾಗಿ ಹಣ ಬಳಕೆ ಮಾಡುವವರಿಗೆ ಈ ದೇಶದಲ್ಲಿ ದಾನ ಸಿಗತ್ತೆ. ಅಪಾತ್ರದಾನ, ಅಯೋಗ್ಯರಿಗೆ ದಾನ ಸಿಗೊಲ್ಲ. ಆದರೆ, ಬಿಜೆಪಿಗೆ ಸಿಗುತ್ತೆ ಎನ್ನುವ ಮೂಲಕ ಆಯನೂರು ಮಂಜುನಾಥ ಡಿಕೆಶಿಗೆ ಕುಟುಕಿದರು.
ಆರೋಗ್ಯ ಸರಿ ಇಲ್ಲದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ವಯಸ್ಸಾಗಿರುವ ದೇವೇಗೌಡರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಕುಟುಂಬದ ವಿರುದ್ಧ ಶತಾಯಗತಾಯ ಹಾವು, ಮುಂಗುಸಿ ಥರ ಡಿಕೆಶಿ ಹೋರಾಟ ಮಾಡಿದ್ದರು. ಇವರು ಮಾಟ ಮಾಡಿಸಿದ್ದಾರೆ ಅಂತ ಅವರು, ಅವರು ಮಾಡ ಮಾಡಿಸಿದ್ದಾರೆ ಅಂತ ಇವರು ನಿಂಬೆಹಣ್ಣು ಇಟ್ಕೊಂಡು ಓಡಾಡುತ್ತಿದ್ದವರು ಈಗ ಅನಿವಾರ್ಯವಾಗಿ ಅವರೊಟ್ಟಿಗೆ ಓಡಾಡಬೇಕಿದೆ. ಅವರಿಗೆ ನೇರವಾಗಿ ಬೈಯ್ಯಲಾರದೇ ಯಡಿಯೂರಪ್ಪ ಅವರಿಗೆ ಬೈಯುತ್ತಿದ್ದಾರೆ ವ್ಯಂಗ್ಯವಾಡಿದರು.
ಹಾಗೆಯೇ ಯಡಿಯೂರಪ್ಪ ಅವರಷ್ಟು ಓಡಾಡುವ, ಕೆಲಸ ಮಾಡುವ ಸಾಮರ್ಥ್ಯ ಇವರಿಗೆ ಇದೆಯೇ? ಸಿದ್ದರಾಮಯ್ಯ ಅವರಿಗೆ ಇದೆಯೇ? ಮಾನಸಿಕವಾಗಿ ತರುಣರಾಗಿರುವ ಯಡಿಯೂರಪ್ಪ ಅವರನ್ನು ಸರಿಗಟ್ಟುವ ಇನ್ನೊಬ್ಬ ರಾಜಕಾರಣಿ ಇಡೀ ರಾಜ್ಯದ ಯಾವುದೇ ಪಕ್ಷದಲ್ಲಿ ಇಲ್ಲ. ಅವರಂತೆ ಓಡಾಡುವ ಛಾತಿ ಡಿಕೆಶಿಗೆ ಇದ್ಯಾ ಅಥವಾ ಸಿದ್ದರಾಮಯ್ಯ ಅವರಿಗೆ ಇದ್ಯಾ ಎಂದು ಪ್ರಶ್ನಿಸಿದರು.