ಬೆಂಗಳೂರು: ಮೈತ್ರಿ ಸರ್ಕಾರದ ಚದುರಂಗದಾಟದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಚೆಕ್ಮೇಟ್ ಕೊಟ್ಟು ಜೆಡಿಎಸ್ಗೆ ಖಾತೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು. ದೇವೇಗೌಡರ ಚಾಣಾಕ್ಷ ನಡೆಯಿಂದಾಗಿ ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಖಾತೆ ಜೆಡಿಎಸ್ ಪಾಲಾಗಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಕೆಲವು ದಿನಗಳಿಂದ ಹಗ್ಗ ಜಗ್ಗಾಟ ನಡೆದು ಶುಕ್ರವಾರ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಇತ್ಯರ್ಥವಾಗಿದೆ. ಹಣಕಾಸು ಮತ್ತು ಇಂಧನ ಖಾತೆ ಬಯಸಿದ್ದ ಜೆಡಿಎಸ್ ಗೆ ಎರಡೂ ಖಾತೆಗಳು ಸಿಕ್ಕಿದೆ.
ಕುಮಾರಸ್ವಾಮಿಯವರು ಬಹುಮತ ಸಾಬೀತು ಪರೀಕ್ಷೆಯಲ್ಲಿ ಗೆದ್ದ ಬಳಿಕ ಸಂಪುಟ ಶೀಘ್ರವೇ ರಚನೆಯಾಗಬೇಕಿತ್ತು. ಆದರೆ ಎರಡು ಪಕ್ಷಗಳ ನಾಯಕರು ನಮಗೆ ಪ್ರಭಾವಿ ಖಾತೆಗಳು ಬೇಕು ಎಂದು ಪಟ್ಟು ಹಿಡಿದ ಕಾರಣ ಸಂಪುಟ ರಚನೆ ಅಡ್ಡಿಯಾಗಿತ್ತು. ನಾಯಕರ ಜೊತೆಗಿನ ಸಂಧಾನ ಪ್ರಯತ್ನ ವಿಫಲವಾದ ಕಾರಣ ದೇವೇಗೌಡರು ವಿದೇಶದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿದ್ದಾರೆ. 6 ನಿಮಿಷದ ಮಾತುಕತೆಯಲ್ಲಿ 6 ಸೂತ್ರ, ಹಲವಾರು ಒಪ್ಪಂದ ಮಾಡಿ ನಾಯಕರಿಗೆ ಚೆಕ್ ಕೊಟ್ಟಿದ್ದಾರೆ.
ನಿಮಗೆ ಖಾತೆಗಳು ಮುಖ್ಯವೋ ಅಥವಾ ಲೋಕಸಭೆ ಚುನಾವಣೆ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿ ವಿಚಾರ ಪ್ರಸ್ತಾಪಿಸಿದ ಗೌಡರು 2019ಕ್ಕೆ ನಮ್ಮ ರಾಜ್ಯದಿಂದಲೇ ಸಂದೇಶ ಕಳಿಸೋಣ. ಕರ್ನಾಟಕದಲ್ಲಿ ಬಿಜೆಪಿಯನ್ನು 10 ಸ್ಥಾನಕ್ಕೆ ಇಳಿಸೋಣ ಎಂದು ಹೇಳಿದ್ದಾರೆ.
ದೇವೇಗೌಡರ ಈ ಮಾತಿಗೆ ರಾಹುಲ್ ಒಪ್ಪಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಗೆ ಇಂಧನ ಖಾತೆ ಬೇಡ. ನಿಮಗೆ ನೀಡುತ್ತೇವೆ. ಇದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ದೇವೇಗೌಡರಿಗೆ ಒಪ್ಪಿಗೆ ನೀಡಿದ ಕೂಡಲೇ ಸರ್ಕಾರದ ಸಂಪುಟ ರಚನೆ ಕಾರ್ಯಕ್ಕೆ ಆಗಿದ್ದ ಅಡ್ಡಿಗಳು ಎಲ್ಲ ನಿವಾರಣೆ ಆಯ್ತು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಎಚ್ಡಿಡಿ ಮುಂದೆ 18 ಪುಟಗಳ ಒಪ್ಪಂದಕ್ಕೆ ಸಹಿ- ಮೈತ್ರಿ ಸುಗಮಕ್ಕೆ 6 ಸೂತ್ರ
ಈ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ಮಾತುಕತೆಗೂ ಅವಕಾಶ ಕೊಡದ ದೇವೇಗೌಡರು ಮಗ ರೇವಣ್ಣನಿಗಾಗಿ ಇಂಧನ ಖಾತೆ ಪಡೆಯುವಲ್ಲಿ ಸಫಲರಾಗಿದ್ದಾರೆ ಎನ್ನುವ ಮಾತು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.