‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈಗ 3ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ (Jodihakki) ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ (Thandav Ram) ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ವಿಶೇಷವಾಗಿ ಇಂದು ಬಿಡುಗಡೆ ಮಾಡಲಾಗಿದೆ.
View this post on Instagram
‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ ಹಾಗೂ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿ ಗಳಿಸಿರುವ ತಾಂಡವ್ ರಾಮ್ ಸಿನಿಮಾಗೆ ‘ದೇವನಾಂಪ್ರಿಯ’ ಎಂಬ ಶೀರ್ಷಿಕೆ ಇಡಲಾಗಿದೆ. ‘ದೇವನಾಂಪ್ರಿಯ’ ಅಂದರೆ ದೇವತೆಗಳಿಗೆ ಪ್ರಿಯನಾದವನು ಎಂದು ಕರೆಯಲಾಗುತ್ತದೆ.
ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆಯ ಆಕೃತಿ, ಎರಡು ಗ್ರಾಮಗಳು ಹೀಗೆ ನಾನಾ ವಿಷಯಗಳು ಕಾಣಿಸುತ್ತವೆ.
ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ (Devanampriya) ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.