ಬೆಂಗಳೂರು: ಉತ್ತರದಲ್ಲಿ ಅಬ್ಬರಿಸ್ತಿರೋ ಮಳೆರಾಯ ದಕ್ಷಿಣದಲ್ಲಿ ಬರ್ಲೋ ಬೇಡ್ವೋ ಅಂತ ಸತಾಯಿಸ್ತಿದ್ದಾನೆ. ಬೆಂಗಳೂರಿನಲ್ಲಿ (Bengaluru Rain) ಮೋಡ ಕವಿದ ವಾತಾವರಣವಿತ್ತು. ಜಿಟಿಜಿಟಿ ಮಳೆ ದಿನವಿಡೀ ಸುರಿಯಿತು.
ರಾಜ್ಯದ ಕರಾವಳಿ-ದಕ್ಷಿಣ ಒಳನಾಡಿನಲ್ಲಿ ಜುಲೈ 16ರ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಮತ್ತಷ್ಟು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿ (Udupi Rain) ಜಿಲ್ಲೆ ಸಂತೆಕಟ್ಟೆ ಓವರ್ ಪಾಸ್ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆ ಕುಸಿದಿದೆ. ರಸ್ತೆ ನಿರ್ಮಾಣದ ವೇಳೆ ಪಾದೆ ಕಲ್ಲು ಸಿಕ್ಕ ಪರಿಣಾಮ ಕಾಮಗಾರಿ ಮೊಟಕುಗೊಂಡಿತ್ತು. ಐದು ದಿನದಿಂದ ಸುರಿದ ಮಳೆಗೆ ಮಣ್ಣುಮೃದುಗೊಂಡು ಕುಸಿದಿದೆ. ಮತ್ತಷ್ಟು ಮಣ್ಣು ಕುಸಿದರೆ ನೂರಾರು ಮನೆಗಳಿಗೆ ಮನೆಗಳಿಗೆ ಸಂಪರ್ಕ ಕಡಿತವಾಗುತ್ತದೆ. ಇದನ್ನೂ ಓದಿ: Rain Alert: ಭಾರೀ ಮಳೆಗೆ ದೆಹಲಿ ತತ್ತರ – ನರ್ಸರಿಯಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ
ಹಾಸನ (Hassan) ಜಿಲ್ಲೆಯ ಮಲೆನಾಡು ಭಾಗದಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಸಕಲೇಶಪುರ ತಾಲೂಕಿನ, ಆನೆಮಹಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಬಂಡೆ ಕುಸಿಯುವ ಹಂತದಲ್ಲಿವೆ. ಈಗಾಗಲೇ ಮಣ್ಣು ಕುಸಿಯಲಾರಂಭಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.
ಇತ್ತ ಮಹಾರಾಷ್ಟ್ರದಲ್ಲಿ (maharastra) ಅಪಾರ ಪ್ರಮಾಣದ ಮಳೆ ಸುರಿಯುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರು ಕೃಷ್ಣಾ ಹಾಗೂ ತುಂಗಭದ್ರಾ ನದಿಪಾತ್ರದಲ್ಲಿ ಅಲರ್ಟ್ ಘೋಷಿಸಿದೆ. ಜಿಲ್ಲೆಗೆ ಎನ್ಡಿಆರ್ಎಫ್ ತಂಡ ಕರೆಸಲಾಗಿದ್ದು, ನದಿ ಪಾತ್ರದಲ್ಲಿ ಬೀಡುಬಿಟ್ಟ NDRF ತಂಡ ತಾಲೀಮು ನಡೆಸಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿ ವ್ಯಾಪ್ತಿಗೆ ಬರುವ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದಿಂದ ಸದ್ಯ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿಬಿಡಲಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಘಟಪ್ರಭಾ ನದಿಯಲ್ಲಿ ಹೊರ ಹರಿವು ಹೆಚ್ಚಿದೆ. ನಿಯಂತ್ರಣ ತಪ್ಪಿ ಬೈಕ್ ನದಿಗೆ ಬಿದ್ದು ಇಬ್ಬರು ಕೊಚ್ಚಿಹೋಗಿರೋ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಬಳಿ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರಿದಿದೆ.
Web Stories