ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಸಿಎಂಗೆ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿ ನಾರಾಯಣ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಮಾನ್ಯ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ರವರಿಗೆ ನಮ್ಮ ಜನರ ನಾಡಿ ಮಿಡಿತವನ್ನು ತಮ್ಮ ಅವಗಾನೆಗೆ ತಿಳಿಸುವೆ. ಮಾನ್ಯರೇ, ತಮಗೆ ರಾಜಕೀಯ ಅನುಭವ ಹಾಗೂ ಸತತ 7 ವರ್ಷಗಳ ಕಾಲ ರಾಜಾಧ್ಯಕ್ಷರಾಗಿ ಅಪಾರ ಅನುಭವ ಹೊಂದಿದ್ದೀರಿ. ತುಮಕೂರು ಲೋಕಸಭಾ ಸ್ಥಾನ ಹಾಲಿ ಸಂಸದರಿಗೆ ನೀಡದಿರುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಇಡೀ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ತಾವು ಪಕ್ಷದ ಮೇಲೆ ಮುನಿಸು ಎಂಬ ಮಾಧ್ಯಮ ವರದಿ ನಗೆ ಪಾಟೀಲಗುವ ಹಂತದಲ್ಲಿ ಬಂದಿದೆ.
ತಾವು ಉಪ ಮುಖ್ಯಮಂತ್ರಿಗಳಾಗಿ ಸರ್ಕಾರದ ಭಾಗಿಗಳಾಗಿ ಹೈಕಮಾಂಡ್ಗೆ ತುಂಬಾ ಹತ್ತಿರಾಗಿದ್ದೀರಿ. ತಾವು ನಿರ್ವಹಿಸುವ ಜಿಲ್ಲೆಗೆ ಲೋಕಸಭಾ ಸೀಟು ಕೊಡಿಸಲು ಸಾಧ್ಯವಾಗಲಿಲ್ಲ ಎಂದರೆ ನಗೆಪಾಟಲು ಆಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಆದ ಕಾರಣ ತಕ್ಷಣವೇ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ಕರೆದು ಮುಂದಿನ ನಿರ್ಣಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಅಧಿಕಾರ ಮುಖ್ಯವಲ್ಲ ಕೇವಲ ಮುಂದಿನ ಎರಡು ತಿಂಗಳಲ್ಲಿ ನಿಮ್ಮ ಅಧಿಕಾರ ಇರುತ್ತೋ ಇಲ್ಲವೋ ತಿಳಿಯದು, ನಂಬಿದ ಜಿಲ್ಲೆಯ ಜನರಿಗೆ ಕಾರ್ಯಕರ್ತರಿಗೆ ಆಗಿರುವ ಅವಮಾನ ಅಷ್ಟಿಷ್ಟಲ್ಲ. ಇದಕ್ಕೆ ತಾವೇ ಉತ್ತರ ಕೊಡಬೇಕಾಗುತ್ತದೆ.
ಈಗಲೂ ಕಾಲ ಮಿಂಚಿಲ್ಲ ತಡ ಮಾಡದೇ ಮಾನ್ಯ ಸಂಸದರಾದ ಮುದ್ದ ಹನುಮೇಗೌಡರಿಗೆ ಸೀಟು ಕೊಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಲ್ಲದಿದ್ದರೆ ಮುಂದಿನ ರಾಜಕೀಯ ಭವಿಷ್ಯ ಕತ್ತಲಾದೀತು. ಉಪ ಮುಖ್ಯಮಂತ್ರಿಗಳ ಸ್ಥಾನ ಮುಖ್ಯವಲ್ಲ ನಂಬಿದ ಕಾರ್ಯಕರ್ತರು ಮುಖ್ಯ ಎಂಬುದು ಮರೆಯಬೇಡಿ. ಮುಂದೆ ನುಗ್ಗಿ ನಿಮ್ಮ ಜೊತೆ ಸದಾ ನಾವಿದ್ದೇವೆ. ನನಗೆ ರಾಜಕಾರಣದ ಕುತಂತ್ರದ ಅರಿವಿದೆ. ಆದರೆ ನಾನು ಮಾತನಾಡುವ ಹಾಗಿಲ್ಲ. ಪಕ್ಷದ ಪ್ರಾಮಣಿಕ ಕಾರ್ಯಕರ್ತನಾಗಿ ಮುಂದಿನ ರಾಜಕೀಯ ಸೂಚನೆ ತಿಳಿಸಿರುವೆ.
ತಾವು ತುಂಬಾ ಬಿಡುವು ಇಲ್ಲದಿರುವ ಹಾಗೂ ಅನೇಕ ಬಾರಿ ತಮ್ಮ ಮನೆಗೆ ಹಾಗೂ ಕಛೇರಿಗೆ ಬಂದರೂ ಭೇಟಿ ಮಾಡಲು ಸಾಧ್ಯವಾಗದಿರುವ ಕಾರಣ ಈ ಮೂಲಕ ತಮಗೆ ವಿನಂತಿಸುವೆ. ದಿಟ್ಟ ಹೆಜ್ಜೆ ಇಡಿ. ಧನ್ಯವಾದಗಳು. ಎಂ.ಡಿ.ಲಕ್ಷ್ಮಿನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು, ಅಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ. ಪ್ರದೇಶ ಕಾಂಗ್ರೆಸ್ ಸಮಿತಿ. ಕರ್ನಾಟಕ ಅಧ್ಯಕ್ಷರು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.