ಬೆಂಗಳೂರು: ಕೋಟ್ಯಂತರ ಭಾರತೀಯರ ಕನಸಾದ ಚಂದ್ರಯಾನ-3 (Chandrayaan-3) ಉಪಗ್ರಹವನ್ನು ಹೊತ್ತ ಮಾರ್ಕ್-3 ನೌಕೆ ನಭಕ್ಕೆ ಹಾರಿದೆ. ಆದರೆ ಈ ಕುರಿತು ಕನ್ನಡ ಉಪನ್ಯಾಸಕನೊಬ್ಬ ಮಾಡಿರುವ ಪೋಸ್ಟ್ ವಿವಾದ ಎಬ್ಬಿಸಿದ್ದು, ಇದೀಗ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (Suresh Kumar) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ (Madhu Bangarappa) ದೂರು ನೀಡಿದ್ದಾರೆ.
ಮಲ್ಲೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ (Hulikunte Murthy) ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಮಾಡಿದ್ದಾನೆ. ಇದನ್ನು ಗಮನಿಸಿದ ಮಾಜಿ ಶಿಕ್ಷಣ ಸಚಿವರು, ಇಂತಹ ಬೇಜವಾಬ್ದಾರಿ ಉಪನ್ಯಾಸಕ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಇಂಥವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಪತ್ರದಲ್ಲೇನಿದೆ..?: ಬೆಂಗಳೂರು ಮಲ್ಲೇಶ್ವರಂ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ತಮ್ಮ ಅಭಿವ್ಯಕ್ತಿ ಸ್ವತಂತ್ರ್ಯವನ್ನು ತಮ್ಮ ಸ್ವೇಚ್ಛಾಚಾರವನ್ನಾಗಿ ತೋರಿದ್ದಾರೆ. ಚಂದ್ರಯಾನ-3 ಉಡಾವಣೆಯಾದ ದಿನವೇ ಉಪನ್ಯಾಸಕ ತನ್ನ ಟ್ವಿಟ್ಟರ್ ಅಕೌಂಟ್ ಮೂಲಕ ‘ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನಿಸತ್ತೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ 8 ವಲಯಗಳಲ್ಲಿ ಕುಡಿಯಲು ನೀರು ಯೋಗ್ಯವಲ್ಲ!
ಇಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರೇರಣೆ ನೀಡಲು ಸಾಧ್ಯ?. ಹುಲಿಕುಂಟೆ ಮೂರ್ತಿಯಿಂದ ಈ ಕುರಿತು ಸ್ಪಷ್ಟೀಕರಣ ಕೇಳುವುದು ಹಾಗೂ ಮತ್ತೊಮ್ಮೆ ಈ ರೀತಿಯ ಬೇಜವಾಬ್ದಾರಿ ನಡವಳಿಕೆ ಜರುಗದಂತೆ ಎಚ್ಚರವಹಿಸಲು ಎಚ್ಚರಿಕೆ ನೀಡಬೇಕು ಎಂದು ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
Web Stories