10 ವರ್ಷಗಳಿಂದ ಸೆಕ್ಸ್ ನಿರಾಕರಿಸಿದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

Public TV
2 Min Read
knife

ಲಕ್ನೋ: 10 ವರ್ಷಗಳಿಂದ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿದ್ದಕ್ಕೆ 30 ವರ್ಷದ ಮಹಿಳೆಯೊಬ್ಬರು ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿರೋ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‍ನಲ್ಲಿ ನಡೆದಿದೆ.

ಗುರುವಾರ ಸುಮಾರು 9.30ರ ಸುಮಾರಿಗೆ ಈ ಘಟನೆ ನಡೆದಿದೆ. ದಂಪತಿ ಬುಲಂದ್‍ಶಹರ್‍ನಿಂದ ಬಂದು 8 ವರ್ಷಗಳಿಂದ ಘಾಜಿಯಾಬಾದ್‍ನಲ್ಲಿ ವಾಸವಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲ. ಆಗಾಗ ಇದೇ ವಿಷಯವಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯ ಗಂಡ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದದೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಆಕೆಯೊಂದಿಗೆ ಮಕ್ಕಳಾಗದಂತೆ ತಡೆದಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಗಂಡನ ವರ್ತನೆಯಿಂದ ಬೇಸತ್ತು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಾತ್‍ರೂಮಿನಿಂದ ಹೊರಬಂದ ಪತಿಯ ಮೇಲೆ ಮಹಿಳೆ ದಾಳಿ ಮಾಡಿದ್ದಾರೆ ಅಂತ ಪೊಲೀಸ್ ಅಧಿಕರಿ ಅನಿಲ್ ಕುಮಾರ್ ಯಾದವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಖೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ನನ್ನ ಗಂಡನಿಗೆ ಈ ರೀತಿ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಹಲ್ಲೆಗೊಳಗಾದ ಪತಿ ಕ್ಯಾಬ್ ಆಪರೇಟರ್ ಆಗಿದ್ದು, ಎರಡು ಇನ್ನೋವಾ ಕಾರ್‍ಗಳನ್ನ ಹೊಂದಿದ್ದಾರೆಂದು ವರದಿಯಾಗಿದೆ.

ಮಕ್ಕಳಾಗಿರಲಿಲ್ಲ: ನನ್ನ ಗಂಡ ತನ್ನ ಪುರುಷತ್ವದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಬೇರೆ ಮಹಿಳೆಯರೊಂದಿಗೆ ನನಗೆ ಮಕ್ಕಳಾಗುತ್ತವೆ. ಆದ್ರೆ ನಿನ್ನೊಂದಿಗೆ ಆಗಲ್ಲ ಎಂದು ಹೇಳುತ್ತಿದ್ದರು. ಆದರೂ ನಾನು ಅವರನ್ನು ಸಹಿಸಿಕೊಂಡಿದ್ದೆ. ಅವರು ನನ್ನನ್ನು ಯಾಕೆ ದ್ವೇಷಿಸುತ್ತಾರೆಂದು ಗೊತ್ತಿಲ್ಲ. ಅವರು ಆಗಾಗ ನನ್ನನ್ನು ದೂರ ಹೋಗುವಂತೆ ಹೇಳುತ್ತಿದ್ದರು. ನಮಗೆ 2006ರಲ್ಲಿ ಮದುವೆಯಾಯಿತು. ನನ್ನನ್ನು ಮತ್ತು ನನ್ನ ತಂಗಿಯರನ್ನು ಅವರು ಆಗಾಗ ನಿಂದಿಸುತ್ತಿದ್ದರು. ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು. ನಮಗೆ ಮಕ್ಕಳಾಗಬೇಕೆಂದು ನಾನು ಸಾಕಷ್ಟು ಬಾರಿ ಅವರನ್ನು ಒತ್ತಾಯಿಸಿದ್ದೆ. ಆದರೆ ಅವರು ನನ್ನೊಂದಿಗೆ ಸಂಭೋಗ ಮಾಡುತ್ತಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ.

ಪಶ್ಚಾತ್ತಾಪವಿಲ್ಲ: ಇದೇ ಕಾರಣಕ್ಕೆ ನಮ್ಮ ಮಧ್ಯೆ ಬುಧವಾರದಂದು ಜಗಳ ನಡೆದಿತ್ತು. ನಾನು ಸಾಕಷ್ಟು ಮಾನಸಿಕ ಹಿಂಸೆ ಮತ್ತು ಅವಮಾನ ಅನುಭವಿಸಿದ್ದೇನೆ. ಆದ್ದರಿಂದ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಸಂಬಂಧಿಕರು ಮಕ್ಕಳಾಗದಿರುವ ಬಗ್ಗೆ ನನ್ನನ್ನು ಪ್ರಶ್ನಿಸಿದಾಗ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲ ಎಂದು ಆಕೆ ಹೇಳಿದ್ದಾರೆ.

ಘಟನೆ ಬಳಿಕ ಹಲ್ಲೆಗೊಳಗಾದ ಪತಿಯನ್ನು ನೋಯ್ಡಾದ ಜೇಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿಕೆ ನೀಡಿದ್ದು, ವೈದ್ಯರು ನನ್ನ ಸಹೋದರನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆತ ಆಗ ತಾನೇ ಬಾತ್‍ರೂಮಿನಿಂದ ಹೊರಗೆ ಬಂದಿದ್ದ. ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಆಕೆ ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಹೋಗಿದ್ದಳು. ನಂತರ ನನ್ನ ಸಹೋದರ ಪೊಲೀಸರಿಗೆ ಕರೆ ಮಾಡಿದ ಎಂದು ಹೇಳಿದ್ದಾರೆ.

ಪತಿಯ ಸ್ಥಿತಿ ಗಂಭೀರ: ಹಲ್ಲೆಗೊಳಗಾದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ನಾವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಅವರ ಸ್ಥಿತಿ ಗಂಭಿರವಾಗಿದೆ. ಅವರು ಬದುಕುಳಿತಯುತ್ತಾರೆ ಅಂತ ಅಂದುಕೊಂಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಂತರವೂ ಮಕ್ಕಳಾಗುತ್ತವೆ ಎಂದು ಆಸ್ಪತ್ರೆಯ ವೈದ್ಯರಾದ ಡಾ. ಸೌರಭ್ ಗುಪ್ತಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *